ಮೊದಲನೇ ಪತ್ನಿಯ ನೋಡೋಕೆ ಹೋಗಿ ಬೀದಿ ಹೆಣವಾದ!

ಬೆಂಗಳೂರು: ದರೋಡೆ ಸುಲಿಗೆ ಮಾಡಿಕೊಂಡು ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದ ರೌಡಿಶೀಟರ್ ನನ್ನು ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ಬಾಣಸವಾಡಿಯ ಚೆಲ್ಲ ಕುಮಾರ್ ಕೊಲೆಯಾದ ರೌಡಿ ಶೀಟರ್. ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಚೆಲ್ಲ ಕುಮಾರ್ ಇಬ್ಬರನ್ನು ಮದುವೆಯಾಗಿದ್ದ. ಎರಡು ಮದುವೆಯಾಗಿದ್ದ ಪರಿಣಾಮ ಮನೆಯಲ್ಲಿ ಇಬ್ಬರು ಪತ್ನಿಯರು ಜಗಳವಾಡುತ್ತಿದ್ದರು. ಹೀಗಾಗಿ ಇಬ್ಬರು ಪತ್ನಿಯರು ಮಕ್ಕಳ ಜೊತೆ ನಗರದ ಬೇರೆ ಕಡೆ ಪ್ರತ್ಯೇಕವಾಗಿ ವಾಸವಾಗಿದ್ದರು.

ಕೊಲೆ ಯತ್ನ, ಸುಲಿಗೆ, ದರೋಡೆ ಸೇರಿದಂತೆ 24ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದ ರೌಡಿಶೀಟರ್ ಚೆಲ್ಲ ಕುಮಾರ್ ಗುರುವಾರ ಮೊದಲನೇ ಹೆಂಡತಿಯನ್ನ ನೋಡುವುದಕ್ಕೆ ರಾಯಸಂದ್ರಕ್ಕೆ ಹೋಗಿದ್ದ. ಆದರೆ ಪತ್ನಿಯನ್ನು ನೋಡದೇ ತನ್ನಿಬ್ಬರು ಮಕ್ಕಳನ್ನ ಮಾತನಾಡಿಸಿಕೊಂಡು ವಾಪಾಸ್ ಆಗುತ್ತಿದ್ದ ವೇಳೆ ಸರ್ಜಾಪುರ ರಸ್ತೆಯ ಶಲ್ ಪೆಟ್ರೋಲ್ ಬಂಕ್ ಬಳಿ ದುಷ್ಕರ್ಮಿಗಳು ಲಾಂಗು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಒಂಬತ್ತು ವರ್ಷದ ಹಿಂದೆ ಈತ ವಾಸವಾಗಿದ್ದ ಬಾಣಸವಾಡಿಯ ಏರಿಯಾದಲ್ಲಿ ಮತ್ತೊಬ್ಬ ರೌಡಿಶೀಟರ್ ಮೈಕಲ್ ಎಂಬಾತನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಬಳಿಕ ಇದೇ ಜಗಳ ಇಬ್ಬರ ನಡುವೆ ಕಿಚ್ಚು ಹಚ್ಚಿಸಿತ್ತು. ಅನೇಕ ಬಾರಿ ನಡೆದ ಇವರಿಬ್ಬರ ಜಗಳ ಪೊಲೀಸ್ ಠಾಣೆ ಮೇಟ್ಟಿಲೇರುವಂತೆ ಮಾಡಿತ್ತು. ಏರಿಯಾದಲ್ಲಿ ಹವಾ ಇಟ್ಟಿದ್ದ ಈತನಿಗೆ ಅದೇ ಮೈಕಲ್ ಶತ್ರುವಾಗಿ ಪರಿಣಮಿಸಿದ್ದನು. ಆಗಾಗ ನಡೆಯುತಿದ್ದ ಸಣ್ಣ ಜಗಳಕ್ಕೆ ಈಗ ಸೇಡು ಎನ್ನುವಂತೆ ನನ್ನ ಪತಿಯನ್ನು ಕೊಲೆ ಮಾಡಿದ್ದಾನೆ ಎಂದು ಮೊದಲನೇ ಪತ್ನಿ ಆರೋಪಿಸಿದ್ದಾರೆ.

ಸದ್ಯಕ್ಕೆ ಈ ಘಟನೆ ಸಂಬಂಧ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ಆರು ಮಂದಿ ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *