ಇಂದು ರೌಡಿ ನಾಗ, ಮಕ್ಕಳಿಗೆ ಬಿಡುಗಡೆ ಸಾಧ್ಯತೆ

ಬೆಂಗಳೂರು: ಕೋಟ್ಯಾಂತರ ರೂಪಾಯಿ ಹಳೇ ನೋಟು ಬದಲಾವಣೆ ದಂಧೆ ಪ್ರಕರಣದಲ್ಲಿ ಸಿಲುಕಿಕೊಂಡು ಪೊಲೀಸರ ಅತಿಥಿಯಾಗಿದ್ದ ರೌಡಿ ನಾಗ ಇಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ.

ನಾಲ್ಕು ದಿನಗಳ ಹಿಂದೆ ಹೈಕೋರ್ಟ್ ನಲ್ಲಿ ಜಾಮೀನು ಪಡೆದಿರೋ ನಾಗ ಇಂದು ಸಂಜೆ 6 ಗಂಟೆ ಬಳಿಕ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕಾನೂನು ಪ್ರಕ್ರಿಯೆಗಳು ಮುಗಿಯದ ಹಿನ್ನೆಲೆಯಲ್ಲಿ ಇಷ್ಟು ದಿನ ಬಿಡುಗಡೆಯಾಗಿರಲಿಲ್ಲ. ಇಂದು ಪ್ರಕ್ರಿಯೆಗಳು ಮುಗಿಯೋ ಸಾಧ್ಯತೆಗಳಿದ್ದು, ರೌಡಿ ನಾಗ ಮತ್ತು ಮಕ್ಕಳಾದ ಗಾಂಧಿ, ಶಾಸ್ತ್ರಿ ಬಿಡುಗಡೆಯಾಗಲಿದ್ದಾರೆ ಎನ್ನಲಾಗಿದೆ.

ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪದಡಿ ಪೊಲೀಸರು ಏಪ್ರಿಲ್ 14ರಂದು ನಾಗನನ್ನು ಬಂಧಿಸಲು ಹೋಗಿದ್ದರು. ಮಾರ್ಚ್ 18ರಂದು ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಎಂಬವರನ್ನ ಅಪಹರಿಸಲಾಗಿತ್ತು. ಕಿಡ್ನ್ಯಾಪ್ ತಂಡ ಶ್ರೀರಾಮಪುರದ ನಾಗನ ಮನೆಗೆ ಉಮೇಶ್‍ರನ್ನ ಕರೆತಂದು 50 ಲಕ್ಷ ರೂ. ಹಣ ವಸೂಲಿ ಮಾಡಿದ್ರು. ಕೊಲೆ ಬೆದರಿಕೆ ಇದ್ದ ಕಾರಣ ಉದ್ಯಮಿ ಉಮೇಶ್ ಯಾವುದೇ ದೂರು ನೀಡಿರಲಿಲ್ಲ. ನಂತರ ಏಪ್ರಿಲ್ 07 ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಉಮೇಶ್ ದೂರು ದಾಖಲಿಸಿದ್ದರು. ಹೀಗಾಗಿ ಕೋರ್ಟ್‍ನಿಂದ ಸರ್ಚ್ ವಾರೆಂಟ್ ತಂದು ಹೆಣ್ಣೂರು ಇನ್ಸ್ ಪೆಕ್ಟರ್ ಶ್ರೀನಿವಾಸ್, ಮಲ್ಲೇಶ್ವರಂ ಎಸಿಪಿ ಸೇರಿದಂತೆ 40 ಕ್ಕೂ ಹೆಚ್ಚು ಪೊಲೀಸರು ನಾಗನ ಮನೆ ಹಾಗೂ ಸ್ನೇಹ ಸೇವಾ ಸಮಿತಿ ಕಚೇರಿಯ ಮೇಲೆ ದಾಳಿ ಮಾಡಿದ್ದರು.

ಪೊಲಿಸರು ದಾಳಿ ಮಾಡುತ್ತಿದ್ದಂತೆಯೇ ನಾಗ ಮನೆಯಿಂದ ಪರಾರಿಯಾಗಿದ್ದು, ಆ ಬಳಿಕ ಆತನನ್ನು ಬಂಧಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

https://www.youtube.com/watch?v=ehMXPLXNDUc

 

 

Comments

Leave a Reply

Your email address will not be published. Required fields are marked *