ನರ್ಸರಿ ಕವಿತೆ ಮೂಲಕ ಮೋದಿಯನ್ನು ಟೀಕಿಸಿದ ಆರ್‌ಜೆಡಿ!

ನವದೆಹಲಿ: ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅಧ್ಯಕ್ಷತೆ ವಹಿಸಿರುವ ಆರ್‌ಜೆಡಿ(ರಾಷ್ಟ್ರೀಯಾ ಜನತಾ ದಳ) ಪಕ್ಷವು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಮಕ್ಕಳ ನರ್ಸರಿ ಕವಿತೆ ಮೂಲಕ ವ್ಯಂಗ್ಯವಾಡಿದ್ದಾರೆ.

ಭವಿಷ್ಯದಲ್ಲಿ, ಮೋದಿ ಭಕ್ತರ ಮಕ್ಕಳು ಈ ಕವಿತೆಯನ್ನು ಕಲಿಯುವರು ಎಂದು ನರ್ಸರಿ ಕವಿತೆಯೊಂದನ್ನು ಮೋದಿ ಹಾಗೂ ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಗಿ ಬದಲಿಸಿ ಆರ್‌ಜೆಡಿ ಟ್ವೀಟ್ ಮಾಡಿದೆ.

ಟ್ವೀಟ್‍ನಲ್ಲಿ ಮೋದಿ ಸರ್ಕಾರ ದೇಶದಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಈ ಸರ್ಕಾರ ರೈತರನ್ನು ಸಂತೋಷವಾಗಿಟ್ಟಿಲ್ಲ. ಮಹಿಳೆಯರಿಗೆ ರಕ್ಷಣೆಯನ್ನೂ ನೀಡಿಲ್ಲ, ಯುವಕರಿಗೆ 10 ಲಕ್ಷ ಉದ್ಯೋಗವನ್ನೂ ಸೃಷ್ಟಿಸಿಲ್ಲ. 15 ಲಕ್ಷ ರೂ. ಜನರ ಖಾತೆಗೂ ಹಾಕಿಲ್ಲ. 2014ರ ಚುನಾವಣೆ ಮೊದಲು ನೀಡಿದ್ದ ಯಾವುದೇ ಮಾತನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ಕವಿತೆ ರಚಿಸಿ ಟಾಂಗ್ ನೀಡಿದೆ.

ತೇಜಸ್ವಿ ಯಾದವ್ ದೇಶದಲ್ಲಿ ನಿರುದ್ಯೋಗಕ್ಕೆ ಪ್ರಮುಖ ಕಾರಣ ಪ್ರಧಾನಿ ಮೋದಿ, ಅವರ ಒಡೆದು ಆಳುವ ನೀತಿಗೆ ಬಿಹಾರದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕಳೆದ ಐದು ವರ್ಷಗಳಲ್ಲಿ ನೀವು ಏನು ಕೆಲಸ ಮಾಡಿದ್ದೀರಿ? ಬಿಹಾರಕ್ಕೆ ಭರವಸೆ ನೀಡಿದ ವಿಶೇಷ ಪ್ಯಾಕೇಜ್ ಸಿಕ್ಕಿದೆಯೇ? ರೈತರ ಆದಾಯವನ್ನು ದ್ವಿಗುಣಗೊಳಿಸಿದ್ದಿರಾ? ಯುವಜನರಿಗೆ ಉದ್ಯೋಗ ದೊರೆತಿದೆಯೇ? ಹಣದುಬ್ಬರ ದರ ಕಡಿಮೆಯಾಗಿದೆಯೇ? ಇದು ಮೋದಿ ಒಡೆದು ಆಳುವ ರಾಜಕಾರಣವನ್ನು ಮಾಡುತ್ತಿದ್ದಾರೆ. ಇದಕ್ಕೆ ಬಿಹಾರದವರು ಸರಿಯಾದ ಉತ್ತರ ನೀಡುತ್ತಾರೆ ಎಂದು ಹರಿಹಾಯ್ದರು.

40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ಎಲ್ಲಾ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಂತಿಮ ಫಲಿತಾಂಶಗಳು ಮೇ 23 ರಂದು ಪ್ರಕಟವಾಗಲಿದೆ. ಬಿಹಾರದಲ್ಲಿ ಆರ್‌ಜೆಡಿ ಕಾಂಗ್ರೆಸ್, ರಾಷ್ಟ್ರೀಯ ಲೋಕಸಮಾತಾ ಪಕ್ಷ (ಆರ್‍ಎಲ್‍ಎಸ್‍ಪಿ), ಹಿಂದೂಸ್ಥಾನಿ ಆವಾಮ್ ಮೋರ್ಚಾ (ಎಚ್‍ಎಎಂ), ಲೋಕ ಜನತಾಂತ್ರಿಕ ದಳ (ಎಲ್‍ಜೆಡಿ) ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮೈತ್ರಿಕೂಟ ರಚಿಸಿಕೊಂಡಿದೆ.

Comments

Leave a Reply

Your email address will not be published. Required fields are marked *