ಧರ್ಮಸ್ಥಳದ ಧರ್ಮಾಧಿಕಾರಿಗಳ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ ದಂಪತಿ

ಕಾಂತಾರ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಧರ್ಮಸ್ಥಳಕ್ಕೆ (Dharmasthala,) ಭೇಟಿ ನೀಡಿ ಮಂಜುನಾಥ ದರ್ಶನ ಪಡೆದಿದ್ದಾರೆ. ನಂತರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ರಿಷಬ್ ದಂಪತಿ, ಕೆಲ ಕಾಲ ಸಿನಿಮಾ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಈ ಸಿನಿಮಾ ಮಾಡುವ ಮುನ್ನವೂ ರಿಷಬ್ ಇಲ್ಲಿಗೆ ಭೇಟಿ ನೀಡಿ ವೀರೇಂದ್ರ ಹೆಗ್ಗಡೆಯವರನ್ನು ಸಿನಿಮಾ ಕುರಿತು ಸಲಹೆ ಪಡೆದಿದ್ದರು. ಇದೀಗ ಮತ್ತೆ ಅವರನ್ನು ಭೇಟಿ ಮಾಡಿ, ಸಿನಿಮಾದ ಯಶಸ್ಸಿನ ಕುರಿತು ಖುಷಿಯನ್ನು ಹಂಚಿಕೊಂಡಿದ್ದಾರೆ.

ಕಾಂತಾರ (Kantara) ಸಿನಿಮಾ ಆಗಲು ಪರೋಕ್ಷವಾಗಿ ವೀರೇಂದ್ರ ಹೆಗ್ಗಡೆಯವರೂ (Virendra Heggade) ಕಾರಣ ಎಂದು ಈ ಹಿಂದೆಯೇ ರಿಷಬ್ ಹೇಳಿದ್ದರು. ಈ ಚಿತ್ರಕ್ಕಾಗಿ ಹೆಗ್ಗಡೆ ಅವರು ಕೆಲವು ಸಲಹೆಗಳನ್ನೂ ನೀಡಿದ್ದರು ಎಂದೂ ತಿಳಿಸಿದ್ದರು. ಸಿನಿಮಾದ ಟ್ರೇಲರ್ ಬಿಡುಗಡೆ ಸೇರಿದಂತೆ ಹಲವು ಬಾರಿ ಈ ಕ್ಷೇತ್ರಕ್ಕೆ ರಿಷಬ್ ಭೇಟಿ ಮಾಡಿದ್ದಾರೆ. ಮೊನ್ನೆಯಷ್ಟೇ ವೀರೇಂದ್ರ ಹೆಗ್ಗಡೆ ಅವರು ಕೂಡ ಕುಟುಂಬ ಸಮೇತ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದರು. ಮತ್ತು ಚಿತ್ರದ ಕುರಿತು ಮೆಚ್ಚುಗೆಯನ್ನೂ ಸೂಚಿಸಿದ್ದರು. ಹಾಗಾಗಿ ರಿಷಬ್ ಮತ್ತೆ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

ಕಾಂತಾರ ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅನೇಕ ಗಣ್ಯರು ಈ ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಠಾಧೀಶರು ಮತ್ತು ರಾಜಕೀಯ ಮುಖಂಡರು ಚಿತ್ರವನ್ನು ನೋಡಿ ಪ್ರಶಂಸಿಸುತ್ತಿದ್ದಾರೆ. ಮೊನ್ನೆಯಷ್ಟೇ ಸದ್ಗುರು ಜಗ್ಗಿವಾಸುದೇವ್, ಶ್ರೀ ರವಿಶಂಕರ್ ಗುರೂಜಿ ತಮ್ಮ ಆಶ್ರಮದಲ್ಲೇ ಭಕ್ತರೊಟ್ಟಿಗೆ ಸಿನಿಮಾ ನೋಡಿದ್ದರು. ಈ ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡಿದ್ದರು. ನಿನ್ನೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿನಿಮಾ ನೋಡಿದ್ದಾರೆ.

ಬೆಂಗಳೂರಿನಲ್ಲಿ ತಮ್ಮ ಆಪ್ತರು ಮತ್ತು ಸ್ವಯಂ ಸೇವಕರ ಜೊತೆ ಸಿನಿಮಾ ನೋಡಿರುವ ನಿರ್ಮಲಾ ಸೀತಾರಾಮನ್ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವಂತಹ ಚಿತ್ರ ಇದಾಗಿದೆ ಎಂದು ಬಣ್ಣಿಸಿದ್ದಾರೆ. ಇಂತಹ ಚಿತ್ರಗಳು ಹೆಚ್ಚೆಚ್ಚು ತೆರೆಯ ಮೇಲೆ ಬರಬೇಕು ಎನ್ನುವ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾವಿದು ಎಂದೂ ಅವರು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *