ಬೇಟೆಗೆ ಅಕ್ರಮ ಬಂದೂಕುಗಳ ಬಳಕೆ- ಇಬ್ಬರ ಬಂಧನ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ನಾಡ ಬಂದೂಕು ಹಿಡಿದುಕೊಂಡು ಓಡಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಮಸ್ಕಿ ತಾಲೂಕಿನ ದ್ಯಾಮಣ್ಣ ಮತ್ತು ಬಳ್ಳಾರಿಯ ಕಂಪ್ಲಿಯ ಈರಣ್ಣ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಗಬ್ಬೂರು ಠಾಣೆ ಪೊಲೀಸರು ಕೆಬಿಜೆಎನ್ ಎಲ್ ಕಾಲುವೆ ಬಳಿ ಆರೋಪಿಗಳನ್ನ ಬಂಧಿಸಿದ್ದಾರೆ. ಕಾಡು ಪ್ರಾಣಿಗಳನ್ನ ಬೇಟೆಯಾಡಲು ಬಂದೂಕುಗಳನ್ನ ಬಳಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಅಕ್ರಮ ನಾಡ ಬಂದೂಕುಗಳನ್ನ ತಾವೇ ತಯಾರಿಸಿಕೊಂಡು ಬಳಸುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ.

ಆರೋಪಿಗಳಿಂದ ಎರಡು ನಾಡ ಬಂದೂಕು, ಮದ್ದಿನ ಪುಡಿ, ಚರಿ, ಬಂದೂಕಿಗೆ ಬಳಸುವ ನಳಿಕೆಯನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಾವುದೇ ಅಧಿಕೃತ ಪರವಾನಿಗೆಯನ್ನ ಹೊಂದಿರದೆ ಬಂದೂಕು ಬಳಸುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *