ಎಂಬಿಪಿಗೆ ಆಶೀರ್ವಾದ ಮಾಡಿದ್ದಕ್ಕೆ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಉಚ್ಛಾಟನೆ!

ಕಲಬುರಗಿ: ಗೃಹ ಸಚಿವ ಎಂಬಿ ಪಾಟೀಲ್‍ಗೆ ರುದ್ರಾಕ್ಷಿ ಕೀರಿಟ ನೀಡಿ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದ್ದಕ್ಕೆ ಕಲಬುರಗಿಯ ಸರಡಗಿ ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿಯವರನ್ನು ಶಿವಾಚಾರ್ಯ ಸಂಸ್ಥೆಯಿಂದ ಉಚ್ಛಾಟನೆ ಮಾಡಲಾಗಿದೆ.

ಶ್ರೀ ರೇವಣಸಿದ್ದ ಸ್ವಾಮೀಜಿಗಳು ಕಲಬುರಗಿ ತಾಲೂಕಿನ ಸರಡಗಿ ಮಠದವರು. ಕಳೆದ ಕೆಲವು ದಿನಗಳ ಹಿಂದೆ ಸರಡಗಿ ಮಠಕ್ಕೆ ಎಂ.ಬಿ ಪಾಟೀಲ್ ಭೇಟಿ ನೀಡಿದ್ದರು. ಈ ವೇಳೆ ರೇವಣಸಿದ್ದ ಸ್ವಾಮೀಜಿಗಳು ಸಚಿವರಿಗೆ ಆಶೀರ್ವಾದ ಮಾಡಿದ್ದರು. ಆದರೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈ ಹಾಕಿದ ಎಂ.ಬಿ.ಪಾಟೀಲ್ ಅವರಿಗೆ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದಕ್ಕೆ ರೇವಣಸಿದ್ದ ಸ್ವಾಮೀಜಿಗಳನ್ನು ಉಚ್ಛಾಟನೆಗೊಳಿಸಿ ಎಂದು ವಿಮಲಮಠದ ವಿರಕ್ತ ಶಿವಾಚಾರ್ಯ ಸ್ವಾಮೀಜಿ ಆದೇಶ ನೀಡಿದ್ದಾರೆ.

ಈ ಬಗ್ಗೆ ಶ್ರೀ ರೇವಣಸಿದ್ದ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಮದ್ಯ ಮುಕ್ತ ಗ್ರಾಮ ಮಾಡಲು ಅಭಿಯಾನ ಹಮ್ಮಿಕೊಂಡಿದ್ದೇವು. ಆ ಒಂದು ಅಭಿಯಾನಕ್ಕೆ ಗೃಹ ಸಚಿವರನ್ನ ಉದ್ಘಾಟನೆಗೆ ಕರೆಸಿದ್ದೇವು. ಈ ವೇಳೆ ಎಂ.ಬಿ ಪಾಟೀಲ್‍ರಿಗೆ ನೀವು ಸಿಎಂ ಆಗುತ್ತೀರಾ ಎಂದು ಆಶೀರ್ವಾದ ಮಾಡಿದ್ದು ನಿಜ. ಮಠಕ್ಕೆ ಬರೋ ಪ್ರತಿಯೊಬ್ಬರನ್ನ ಆಶಿರ್ವಾದ ಮಾಡೋದು ನಮ್ಮ ಕರ್ತವ್ಯ ಎಂದರು.

ಆದರೆ ಇದೇ ವಿಚಾರದಿಂದ ನನ್ನ ಶಿವಾಚಾರ್ಯ ಸಂಸ್ಥೆಯಿಂದ ಉಚ್ಛಾಟಿಸಲಾಗಿದೆ. ನನ್ನ ಕರ್ತವ್ಯ ನಾನು ಪಾಲನೆ ಮಾಡಿದ್ದೀನಿ, ಉಚ್ಛಾಟನೆ ಮಾಡಿದರೆ ಮಾಡಲಿ ಎಂದು ವಿಮಲ ಮಠದ ವೀರಕ್ತ ಶಿವಾಚಾರ್ಯ ಸ್ವಾಮೀಜಿಗೆ ರೇವಣಸಿದ್ದ ಶಿವಚಾರ್ಯ ಸ್ವಾಮೀಜಿ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *