ಉಡುಪಿ: ಕಾಡುಪ್ರಾಣಿಗಳು ನಾಡಿಗೆ ಬಂದು ಬಾವಿಗೆ ಬೀಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತದೆ. ಅದರಲ್ಲೂ ಪಶ್ಚಿಮ ಘಟ್ಟದ ತಪ್ಪಲಿನ ಉಡುಪಿ ಜಿಲ್ಲೆಯಲ್ಲಿ ಚಿರತೆ ಬಾವಿಗೆ ಬೀಳುವ ಪ್ರಕರಣ ಜಾಸ್ತಿಯಾಗಿದೆ. ಈ ನಡುವೆ ಭಾರೀ ಗಾತ್ರದ ಕಾಳಿಂಗ ಸರ್ಪ ಬಾವಿಗೆ ಬಿದ್ದಿದೆ.
ಕುಂದಾಪುರ ತಾಲೂಕಿನ ಸಿದ್ದಾಪುರದ ಅತ್ಮಿಜೆಡ್ಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಕುಂದಾಪುರದಲ್ಲಿ ಕಾಳಿಂಗ ಸರ್ಪವೊಂದು ಬಾವಿಗೆ ಬಿದ್ದಿತ್ತು. ಆಯ ತಪ್ಪಿ ಬಾವಿಗೆ ಜಾರಿ ಬಿದ್ದಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನ ಇದೀಗ ರಕ್ಷಣೆ ಮಾಡಲಾಗಿದೆ.

ಚಂದ್ರ ಕೊಠಾರಿ ಅವರ ಬಾವಿಗೆ ಬಿದ್ದಿದ್ದ ಕಾಳಿಂಗ ಸರ್ಪವನ್ನ ಮೇಲೆ ಬರುವಂತೆ ಮಾಡಲು ಸ್ಥಳೀಯರು ಪ್ರಯತ್ನಪಟ್ಟಿದ್ದಾರೆ. ಸಾಧ್ಯವಾಗದ ಕಾರಣ ಶಂಕರನಾರಾಯಣ ವ್ಯಾಪ್ತಿಯ ಅರಣ್ಯ ಇಲಾಖೆ ಸಿಬ್ಬಂದಿ ಕೃಷ್ಣಮೂರ್ತಿ ಅವರನ್ನು ಕರೆಸಲಾಗಿದೆ. ಸ್ಥಳಕ್ಕಾಗಮಿಸಿದ ಅವರು 13 ಅಡಿ ಉದ್ದದ 15 ಕೆ.ಜಿ ತೂಕದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿದರು. ಕಾಳಿಂಗ ಸರ್ಪ ನೀರು ತುಂಬಿದ ಬಾವಿಯಲ್ಲಿ ಇದ್ದ ಕಾರಣ ಮೇಲಕ್ಕೆತ್ತಲು ಸ್ವಲ್ಪ ಪರಿಶ್ರಮ ಪಡಬೇಕಾಯಿತು. ಕಾಳಿಂಗವನ್ನು ಸುರಕ್ಷಿತವಾಗಿ ಪಶ್ಚಿಮಘಟ್ಟದ ಕಾಡಿಗೆ ಬಿಡಲಾಗಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಕೃಷ್ಣಮೂರ್ತಿ, ನೀರಿನಲ್ಲಿ ಇರುವ ಹಾವುಗಳು ಸುಲಭದಲ್ಲಿ ಸೆರೆಯಾಗುವುದಿಲ್ಲ. ಬಾವಿಗೆ ಇಳಿಯಲು ಸಾಧ್ಯವಾಗದೆ ಮೇಲಿನಿಂದ ಎತ್ತಲೂ ಆಗದ ಸ್ಥಿತಿ ಕುಂದಾಪುರದಲ್ಲಿ ನಿರ್ಮಾಣವಾಗಿತ್ತು. ರಕ್ಷಣೆ ಮಾಡಿದ ಕಾಳಿಂಗ ಸರ್ಪವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply