ಬಿಜೆಪಿ ವಿರುದ್ಧ ಕಿಡಿಕಾರಲು ಹೋಗಿ ಎಡವಟ್ಟು: ಕ್ಷಮೆ ಕೇಳಿದ ದಿಗ್ವಿಜಯ್ ಸಿಂಗ್

ನವದೆಹಲಿ: ಭೋಪಾಲ್ ನಗರ ಮೆಟ್ರೋ ಸೇತುವೆ ಚಿತ್ರ ಎಂದು ಫೇಕ್ ಫೋಟೋವನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಿಂದ ಫೋಟೋವೊಂದನ್ನು ಶನಿವಾರ ಟ್ವೀಟ್ ಮಾಡಿದ್ದ ಅವರು, ಇದು ಮಧ್ಯಪ್ರದೇಶದ ಭೋಪಾಲ್ ನಗರದ ಸೇತುವೆಯಾಗಿದ್ದು, ಈಗಾಗಲೇ ಸೇತುವೆಗೆ ಡ್ಯಾಮೇಜ್ ಆಗಿದೆ. ಬಿಜೆಪಿ ನಾಯಕರು ಕೇವಲ ಸಿದ್ಧಾಂತಗಳನ್ನು ಮಾತನಾಡುತ್ತಾರೆ. ಆದರೆ ಇದು ಅವರಿಗೆ ತಿಳಿಯುವುದಿಲ್ಲ ಎಂದು ಬರೆದುಕೊಂಡಿದ್ದರು. ಅಲ್ಲದೇ ತಮ್ಮ ಟ್ವೀಟ್ ನಲ್ಲಿ ವಾರಣಾಸಿ ಸೇತುವೆ ಕುಸಿತ ಕುರಿತು ಉಲ್ಲೇಖಿಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಲು ಕೋರಿದ್ದರು.

https://twitter.com/digvijaya_28/status/1005679859732008961

ಈ ಫೋಟೋ ಹಿಂದಿನ ಸತ್ಯಾಂಶವನ್ನು ಬಿಚ್ಚಿಟ್ಟ ಹಿರಿಯ ಪತ್ರಕರ್ತರೊಬ್ಬರು 2016ರ ಚಿತ್ರವನ್ನು ನೀವು ಅಪ್ಲೋಡ್ ಮಾಡಿದ್ದೀರಿ. ಪಾಕಿಸ್ತಾನದ ರಾವಲ್ಪಿಂಡಿ ಮೆಟ್ರೋ ಸೇತುವೆ ಚಿತ್ರ ಎಂದು ಮರು ಟ್ವೀಟ್ ಮಾಡಿದ್ದರು. ಅಲ್ಲದೇ ತೆಲಂಗಾಣ ಸಚಿವ, ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕ ಕೆಟಿ ರಾಮರಾವ್ ಅವರು ಸಹ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದರು.

ಪತ್ರಕರ್ತರ ಸ್ಪಷ್ಟನೆ ಕೇಳುತ್ತಿದಂತೆ ಎಚ್ಚೆತ್ತ ದಿಗ್ವಿಜಯ್ ಸಿಂಗ್ ಅವರು ತನ್ನ ಸ್ನೇಹಿತ ಕಳುಹಿಸಿದ ಚಿತ್ರವನ್ನು ತಾನು ಟ್ವೀಟ್ ಮಾಡಿದ್ದು, ಈ ಕುರಿತು ಮಾಹಿತಿ ಪಡೆದಿರಲಿಲ್ಲ ಎಂದು ಕ್ಷಮೆ ಕೇಳಿದ್ದಾರೆ.

ಇದೇ ಮೊದಲಲ್ಲ: ಈ ಹಿಂದೆಯೂ ಕಾಂಗ್ರೆಸ್ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್ ಅವರು ಟ್ವೀಟ್‍ರಲ್ಲಿ ಪೋಸ್ಟ್ ಮಾಡಿ ಹಲವು ಎಡವಟ್ಟುಗಳನ್ನು ಮಾಡಿಕೊಂಡಿದ್ದರು. ಒಮ್ಮೆ ಕಾಂಗ್ರೆಸ್ ಸಂಸದೆ ರಾಜಕುಮಾರಿ ರತ್ನಾಸಿಂಗ್ ಅವರ ಬಗ್ಗೆ ಟ್ವೀಟ್ ಮಾಡಿ ರಾಜೀವ್ ಗಾಂಧಿ ಬದಲಾಗಿ ರಾಹುಲ್ ಗಾಂಧಿ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ಟ್ವೀಟ್ ಮಾಡಿ ಬಳಿಕ ಡಿಲೀಟ್ ಮಾಡಿದ್ದರು. ಅಲ್ಲದೇ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಪೋಪ್ ಕುರಿತ ಫೇಕ್ ವಿಡಿಯೋ ಟ್ವೀಟ್ ಮಾಡಿ ಪ್ರಮಾದ ಎಸಗಿದ್ದರು.

Comments

Leave a Reply

Your email address will not be published. Required fields are marked *