ಚಾರ್ಜ್‌ಶೀಟ್‌ನಲ್ಲಿ ಗೌಪ್ಯ ಮಾಹಿತಿ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ: ಕೋರ್ಟ್‌ ಮೊರೆ ಹೋದ ದರ್ಶನ್‌

ಬೆಂಗಳೂರು: ಚಾರ್ಜ್‌ಶೀಟ್‌ನಲ್ಲಿ (Chargesheet) ಇರುವ ಗೌಪ್ಯ ಮಾಹಿತಿಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಕೋರಿ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ (Darshan) ಹೈಕೋರ್ಟ್‌ (High Court) ಮೊರೆ ಹೋಗಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಪೊಲೀಸರು ನಾಲ್ಕು ಸಾವಿರ ಪುಟಗಳಿರುವ ದೋಷಾರೋಪ ಪಟ್ಟಿಯನ್ನು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. ದೋಷಾರೋಪ ಪಟ್ಟಿಯಲ್ಲಿರುವ ಗೌಪ್ಯ ಮಾಹಿತಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ದರ್ಶನ್‌ ಪರ ವಕೀಲರು ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 17 ಆರೋಪಿಗಳು ಏನು ಮಾಡಿದ್ದಾರೆ ಎಂಬ ವಿವರ ಚಾರ್ಜ್‌ಶೀಟ್‌ನಲ್ಲಿದೆ. ದರ್ಶನ್‌ ಅವರು ರೇಣಕಾಸ್ವಾಮಿಗೆ ಯಾವ ರೀತಿ ಟಾರ್ಚರ್‌ ನೀಡಿದ್ದಾರೆ? ಪವಿತ್ರಾ ಗೌಡ ಹೇಳಿದ್ದೇನು? ರೇಣುಕಾಸ್ವಾಮಿ ಹತ್ಯೆಯಲ್ಲಿ ಯಾರ ಪಾತ್ರ ಏನಿದೆ ಎನ್ನುವುದರ ಸಂಪೂರ್ಣವಾದ ವಿವರ ಚಾರ್ಜ್‌ಶೀಟ್‌ನಲ್ಲಿದೆ.

ಕಳೆದ ವಾರ ದರ್ಶನ್‌ ಅವರು ಟಿವಿಗಾಗಿ ಬೇಡಿಕೆ ಇಟ್ಟಿದ್ದರು. ಜೈಲಿನ ನಿಯಮದ ಪ್ರಕಾರ ಅವರಿಗೆ ಟಿವಿ ನೀಡಲಾಗಿತ್ತು.