ಸಂಕುಚಿತ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ – OICಗೆ ವಿದೇಶಾಂಗ ಇಲಾಖೆಯ ತಿರುಗೇಟು

ನವದೆಹಲಿ : ಪ್ರವಾದಿ ಮುಹಮ್ಮದ್ ಪೈಗಂಬರ್‌ರ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿದ ಹೇಳಿಕೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಹೇಳಿಕೆ ಹಿನ್ನಲೆಯಲ್ಲಿ ಭಾರತ ಸರ್ಕಾರವನ್ನು ಟೀಕಿಸಿದ್ದ ಇಸ್ಲಾಮಿಕ್ ಸಹಕಾರ ಸಂಘಟನೆಗೆ (OIC) ಭಾರತೀಯ ವಿದೇಶಾಂಗ ಇಲಾಖೆ ತಿರುಗೇಟು ನೀಡಿದೆ.

ಇಂದು ಪ್ರಕರಣ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ, “ನಾವು ಇಸ್ಲಾಮಿಕ್ ಸಹಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭಾರತದ ಬಗ್ಗೆ ಮಾತನಾಡಿರುವುದನ್ನು ಗಮನಿಸಿದ್ದೇವೆ, ಭಾರತ ಸರ್ಕಾರದವು ಓಐಸಿ ಕಾರ್ಯದರ್ಶಿಯ ಅನಪೇಕ್ಷಿತ ಹೇಳಿಕೆಗಳನ್ನು ತಿರಸ್ಕರಿಸಿದ್ದು, ಇವು ಸಂಕುಚಿತ ಮನಸ್ಸಿನಿಂದ ಕೂಡಿದ ಹೇಳಿಕೆಗಳು” ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪೈಗಂಬರ್‌ ವಿರುದ್ಧ ವಿವಾದಾತ್ಮಕ ಹೇಳಿಕೆ – ಯಾರು ಈ ನೂಪುರ್ ಶರ್ಮಾ?

OIC ಸೆಕ್ರೆಟರಿಯೇಟ್ ಮತ್ತೊಮ್ಮೆ ಪ್ರೇರಿತ, ತಪ್ಪುದಾರಿಗೆಳೆಯುವ ವಿಚಾರ ಆಯ್ಕೆ ಮಾಡಿರುವುದು ವಿಷಾದನೀಯ, OIC ಸೆಕ್ರೆಟರಿಯೇಟ್ ತನ್ನ ಕೋಮುವಾದಿ ವಿಧಾನವನ್ನು ಅನುಸರಿಸುವುದನ್ನು ನಿಲ್ಲಿಸಬೇಕು, ಎಲ್ಲಾ ನಂಬಿಕೆಗಳು ಮತ್ತು ಧರ್ಮಗಳಿಗೆ ಸರಿಯಾದ ಗೌರವವನ್ನು ತೋರಿಸಲು ನಾವು ಒತ್ತಾಯಿಸುತ್ತೇವೆ ಎಂದು ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ‌. ಇದನ್ನೂ ಓದಿ: ನೂಪುರ್ ಶರ್ಮಾ ವಿರುದ್ಧ ಕತಾರ್ ಕಿಡಿ – ಟ್ರೆಂಡಿಂಗ್ ಆಯ್ತು #BycottQatarAirways ಅಭಿಯಾನ

ಭಾರತ ಸರ್ಕಾರವು ಎಲ್ಲ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ, ಆಕ್ಷೇಪಾರ್ಹ ಹೇಳಿಕೆಗಳನ್ನು ನಿರ್ದಿಷ್ಟ ಧಾರ್ಮಿಕ ವ್ಯಕ್ತಿಗಳು ಮಾಡಿದ್ದಾರೆ. ಇದು ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ, ಸಂಬಂಧಿತ ಸಂಸ್ಥೆಗಳಿಂದ ಈ ವ್ಯಕ್ತಿಗಳ ವಿರುದ್ಧ ಈಗಾಗಲೇ ಬಲವಾದ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *