ರೆಬೆಲ್ ಶಾಸಕರಿಂದ ಸಿಎಂ ಭೇಟಿ – ರಾಜೀನಾಮೆ ನೀಡದಂತೆ ಮನವಿ

ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ರೆಬೆಲ್ ಗಳೆಂದೇ ಗುರುತಿಸಲಾಗಿದ್ದ ಶಾಸಕರು ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ರಾಜೀನಾಮೆ ನೀಡದಂತೆ ಸಿಎಂ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ ನಡೆಸುತ್ತಿದ್ದ ವೇಳೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅತೃಪ್ತರ ಪಟ್ಟಿಯಲ್ಲಿದ್ದ ಶಾಸಕರಾದ ಕಂಪ್ಲಿ ಗಣೇಶ್, ಭೀಮಾನಾಯಕ್, ಸುಬ್ಬಾರೆಡ್ಡಿ ಅವರು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ ನಂತರ ಮೂವರು ಅತೃಪ್ತ ಶಾಸಕರು ಭೇಟಿ ಮಾಡಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಟ್ಟು, ಬಿಜೆಪಿಗೆ ಹೋಗದಂತೆ ಮನವೊಲಿಸಿದ್ದಾರೆ. ಇದಕ್ಕೆ ಅತೃಪ್ತ ಶಾಸಕರು ಪ್ರತಿಕ್ರಿಯಿಸಿ, ನಾವು ರಾಜೀನಾಮೆ ನೀಡುವುದಿಲ್ಲ. ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಂಪ್ಲಿ ಶಾಸಕ ಗಣೇಶ್, ಅಧಿಕಾರ ಶಾಶ್ವತ ಅಲ್ಲ, ಪಕ್ಷದ ಚಿಹ್ನೆಯಿಂದ ಗೆದ್ದು ಬಂದಿರುವುದು ಮುಖ್ಯ. ಅಧಿಕಾರ ಇರುತ್ತದೆ ಹೋಗುತ್ತದೆ. ಒಂದು ಪಕ್ಷದ ಚಿಹ್ನೆ ಮೇಲೆ ಗೆದ್ದು ಬಂದ ಮೇಲೆ ನಿಯತ್ತಾಗಿರಬೇಕು, ಲಾಯಕ್ಕಾಗಿರಬೇಕು ಎಂದು ಪರೋಕ್ಷವಾಗಿ ರಾಜೀನಾಮೆ ಕೊಟ್ಟಿರುವ ಶಾಸಕರನ್ನು ಕುಟುಕಿದ್ದಾರೆ.

ಈ ಹಿಂದಿಗಿಂತಲೂ ಕ್ಷೇತ್ರಗಳು ಚೆನ್ನಾಗಿ ಅಭಿವೃದ್ಧಿಯಾಗಿವೆ. ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ನನ್ನ ಕ್ಷೇತ್ರಕ್ಕೆ ಸಿಎಂ 75 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಬಿಜೆಪಿಯವರು ನನ್ನ ಸಂಪರ್ಕ ಮಾಡಿಲ್ಲ, ಸಂಪರ್ಕ ಮಾಡಿದರೂ ನಾನು ಬಿಟ್ಟು ಹೋಗುವುದಿಲ್ಲ ಎಂದು ಕಂಪ್ಲಿ ಗಣೇಶ್ ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *