ಕತ್ತಿಯಿಂದ ಕುತ್ತಿಗೆಯನ್ನು ಇರಿದು ವ್ಯಾಪಾರಿ ಬರ್ಬರ ಹತ್ಯೆ -ಸ್ಥಳೀಯರ ಸಮಯ ಪ್ರಜ್ಞೆಯಿಂದ ಆರೋಪಿಗಳು ಸೆರೆ

ಮಡಿಕೇರಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ದಲ್ಲಾಳಿಯನ್ನು ಮೂವರು ವ್ಯಕ್ತಿಗಳು ಕತ್ತಿಯಿಂದ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.

ಶಫೀಕ್ ಮೃತ ದುರ್ದೈವಿ. ಕಳೆದ ರಾತ್ರಿ 10.30 ಗಂಟೆಗೆ ವಿರಾಜಪೇಟೆಯ ಶಫೀಕ್ ಅವರನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ಅಸ್ಸಾಂ ಮೂಲದ ವ್ಯಕ್ತಿಯೊಬ್ಬನ ಜೊತೆ ಮತ್ತೊಬ್ಬ ಪ್ರಮುಖ ಆರೋಪಿ ಕೆದಮುಳ್ಳೂರಿನ ಮಾಳೇಟಿರ ದರ್ಶನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಹತ್ಯೆಗೊಳಗಾಗಿರುವ ಶಫೀಕ್ ರಿಯಲ್ ಎಸ್ಟೇಟ್ ದಲ್ಲಾಳಿ ವೃತ್ತಿಯೊಂದಿಗೆ ಹೋಟೆಲ್ ನಡೆಸುತ್ತಿದ್ದು, ಪತ್ನಿ ಹಾಗೂ ತಾಯಿಯೊಂದಿಗೆ ವಿರಾಜಪೇಟೆ-ಗೋಣಿಕೊಪ್ಪ ರಸ್ತೆಯಲ್ಲಿರುವ ಮಂಜುನಾಥ ನಗರದಲ್ಲಿ ನೆಲೆಸಿದ್ದರು.

ಎರಡು ದಿನಗಳ ಹಿಂದೆಯಷ್ಟೆ ಶಫೀಕ್ ಪತ್ನಿ ತವರು ಮನೆಗೆ ಹೋಗಿದ್ದರು. ಅಲ್ಲದೇ ಅವರ ತಾಯಿ ಕೃತ್ಯ ನಡೆಯುವ ಸ್ವಲ್ಪ ಹೊತ್ತಿನ ಮೊದಲು ಪಕ್ಕದ ಮನೆಗೆ ತೆರಳಿದ್ದಾರೆ. ಈ ಸಮಯ ಸಾಧಿಸಿ ಶಫೀಕ್ ಒಬ್ಬರೇ ಇರುವುದನ್ನು ಖಾತರಿ ಪಡಿಸಿಕೊಂಡಿರುವ ಕೆದಮುಳ್ಳೂರಿನ ಮಾಳೆಯಂಡ ದರ್ಶನ್ ಹಾಗೂ ಇನ್ನಿಬ್ಬರು ಮನೆಯೊಳಗೆ ಬಂದಿದ್ದಾರೆ. ಇವರ ನಡುವೆ ಮಾತುಕತೆ ನಡೆಯುತ್ತಿದ್ದಂತೆಯೇ ಹಂತಕರು ಶಫೀಕ್ ಅವರ ಮೇಲೆ ಎರಗಿ ಹಲ್ಲೆ ಮಾಡಿ ಕತ್ತಿಯಿಂದ ಕುತ್ತಿಗೆಯ ಭಾಗಕ್ಕೆ ಕಡಿದಿದ್ದಾರೆ. ಕತ್ತಿಯ ಪ್ರಹಾರಕ್ಕೆ ಸಿಲುಕಿ ಶಫೀಕ್ ಸ್ಥಳದಲ್ಲಿಯೇ ಜೀವತೆತ್ತಿದ್ದಾರೆ.

ಸ್ಥಳೀಯರ ಸಮಯಪ್ರಜ್ಞೆ – ಆರೋಪಿಗಳ ಸೆರೆ:
ಶಫೀಕ್ ಅವರನ್ನು ಹತ್ಯೆ ಮಾಡುತ್ತಿದ್ದ ಸಂದರ್ಭ ಕಿರುಚಾಟ ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಸ್ಥಳೀಯರು ಮನೆಯೊಳಗೆ ಏನೋ ಅನಾಹುತ ನಡೆಯುತ್ತಿದೆ ಎಂದು ಊಹಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಮನೆಯನ್ನು ಸುತ್ತುವರಿದಿದ್ದಾರೆ. ಇದರಿಂದಾಗಿ ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಲು ಸಾಧ್ಯವಾಗಲಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ವಿರಾಜಪೇಟೆ ಪೊಲೀಸರು ಆರೋಪಿಗಳಾದ ಮಾಳೇಟಿರ ದರ್ಶನ್ ಹಾಗೂ ಅಸ್ಸಾಂ ಮೂಲದ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *