ಅರ್ಜುನ್ ಕಪೂರ್ ಅಲ್ಲ ರಣ್‍ವೀರ್ ಸಿಂಗ್ ಆಗಲಿದ್ದಾರೆ ಕಪಿಲ್ ದೇವ್

ಮುಂಬೈ: ರಣ್‍ವೀರ್ ಸಿಂಗ್ ತಮ್ಮ ಎಲ್ಲಾ ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ರಣ್‍ವೀರ್ ಸಿಂಗ್ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಮೊದಲು ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ಅರ್ಜುನ್ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದವು. ಈ ಸಿನಿಮಾದ ನಟನೆಗಾಗಿ ರಣ್‍ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ನಿಜ ಜೀವನದಲ್ಲಿ ರಣ್‍ವೀರ್ ಹಾಗೂ ಅರ್ಜುನ್ ಒಳ್ಳೆಯ ಸ್ನೇಹಿತರು ಆದರೆ ಚಿತ್ರದಲ್ಲಿ ಪಾತ್ರದ ವಿಷಯ ಬಂದಾಗ ಇಬ್ಬರೂ ಎದುರಾಳಿಗಳಾಗುತ್ತಾರೆ. ಆದರೆ ಈಗ ಕಪಿಲ್ ಅವರ ಚಿತ್ರ ರಣ್‍ವೀರ್‍ಗೆ ಒಲಿದಿದೆ.

1983ರಲ್ಲಿ ಲಂಡನ್‍ನಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಭಾರತ ಜಯಿಸಿದ ಕ್ಷಣಗಳನ್ನು ಬೆಳ್ಳಿ ಪರದೆ ಮೇಲೆ ತರಲು ಕಬಿರ್ ಖಾನ್ ತರಲು ಪ್ರಯತ್ನಿಸಿದ್ದಾರೆ.

ಭಜರಂಗಿ ಭಾಯ್‍ಜಾನ್ ಚಿತ್ರದ ನಿರ್ದೇಶಕ ಕಬಿರ್ ಖಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ವೀಕೆಂಡ್‍ನಲ್ಲಿ ರಣವೀರ್ ಭೇಟಿ ಆಗಿ ಎಲ್ಲಾ ಮಾತುಕತೆ ನಡೆಸಿದ್ದಾರೆ. ಈ ಚಿತ್ರದ ಕಥೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತರಾದ ನಿರ್ದೇಶಕ ಸಂಜಯ್ ಪುರಾನ್ ಸಿಂಗ್ ಚೌಹಾನ್ ಬರೆಯಲಿದ್ದಾರೆ. ಫ್ಯಾಂಟಮ್ ಫಿಲ್ಮ್ಸ್ ಹಾಗೂ ಸಿಸಿಎಲ್‍ನ ಮ್ಯಾನೆಜಿಂಗ್ ಡೈರೆಕ್ಟರ್ ಆದ ವಿಷ್ಣುವರ್ಧನ್ ಇಂದೂರಿ ಈ ಚಿತ್ರದ ಸಹ-ನಿರ್ಮಾಪಕರಾಗಿದ್ದಾರೆ.

Comments

Leave a Reply

Your email address will not be published. Required fields are marked *