ರಣಜಿ ಪಂದ್ಯ: ಮೊದಲ ದಿನದಾಟದ ಅಂತ್ಯಕ್ಕೆ ಗೋವಾ ವಿರುದ್ಧ ಕರ್ನಾಟಕಕ್ಕೆ 5 ವಿಕೆಟ್ ನಷ್ಟಕ್ಕೆ 222 ರನ್

ಶಿವಮೊಗ್ಗ: ನವಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೋವಾ ತಂಡದ ವಿರುದ್ಧ ಕರ್ನಾಟಕ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ​222 ರನ್​ ಗಳಿಸಿದೆ.

ಮಳೆಯಿಂದಾಗಿ ಪಂದ್ಯ ತಡವಾಗಿ ಪ್ರಾರಂಭವಾಯಿತು. ಟಾಸ್ ಗೆದ್ದ ಗೋವಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮಳೆಯಿಂದ ಒದ್ದೆಯಾದ ಪಿಚ್​​ನ ಲಾಭ ಪಡೆದ ಗೋವಾ ಬೌಲರ್​ಗಳು ಕರ್ನಾಟಕದ ಬ್ಯಾಟರ್​ಗಳನ್ನು ಕಾಡಿದರು. 65 ರನ್​​ಗಳಿಗೆ 4 ವಿಕೆಟ್ ಕಳೆದುಕೊಂಡ ಕರ್ನಾಟಕ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತು. ಆರಂಭಿಕರಾದ ನಿಖಿನ್ ಜೋಸೆ ಹಾಗೂ ನಾಯಕ ಮಾಯಂಕ್ ಅರ್ಗವಾಲ್ ಜೋಡಿ ನಿಧಾನಗತಿಯಲ್ಲಿ ಬರುತ್ತಿದ್ದ ಚೆಂಡನ್ನು ಎದುರಿಸಲು ಪರದಾಡಿದರು. ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್​ ಅವರ ಪುತ್ರ ಅರ್ಜುನ್ ತೆಂಡೂಲ್ಕರ್​ 3 ವಿಕೆಟ್​ ಪಡೆದು ವಿಜೃಂಭಿಸಿದರು. ನಿಖಿನ್​ (3), ಕೃಷ್ಣನ್​ ಶ್ರೀಜಿತ್​ (0), ಉತ್ತಮವಾಗಿ ಆಡುತ್ತಿದ್ದ ಅಭಿನವ್​ ಮನೋಹರ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

ಒಂದೆಡೆ ವಿಕೆಟ್​ ಉರುಳುತ್ತಿದ್ದರೂ, ನೆಲಕಚ್ಚಿ ಆಡಿದ ನಾಯಕ ಮಾಯಾಂಕ್ ಅರ್ಗವಾಲ್ 69 ಎಸೆತಗಳಲ್ಲಿ 28 ರನ್ ಗಳಿಸಿದ್ದಾಗ ವಾಸುಕಿ ಕೌಶಿಕ್​ ಅವರಿಗೆ ವಿಕೆಟ್ ಒಪ್ಪಿಸಿದರು. ಐದನೇ ಕ್ರಮಾಂಕದಲ್ಲಿ ಆಡಲು ಬಂದ ಸಮರನ್ ರವಿಚಂದ್ರನ್​ 3 ರನ್ ಗಳಿಸುವಷ್ಟರಲ್ಲಿ ಸುಸ್ತಾದರು.

ಶತಕದತ್ತ ಕರುಣ್​ ನಾಯರ್: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೈಫಲ್ಯ ಕಂಡು ಹೊರಬಿದ್ದಿರುವ ಕರುಣ್ ನಾಯರ್ ದೇಶೀ ಟೂರ್ನಿಗಳಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. 138 ಎಸೆತಗಳಲ್ಲಿ 86 ರನ್ ಗಳಿಸಿದ್ದಾರೆ. ಶ್ರೇಯಸ್ ಗೋಪಾಲ್ 48 ರನ್​ ಗಳಿಸಿದ್ದು, ಇಬ್ಬರೂ ನಾಳೆಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಶ್ರೇಯಸ್ ಗೋಪಾಲ್ ಹಾಗೂ ಕರುಣ್ ನಾಯರ್ 94 ರನ್​​ಗಳ ಜೊತೆಯಾಟದಿಂದ ತಂಡವು ದಿಢೀರ್ ಕುಸಿತದಿಂದ ಚೇತರಿಸಿಕೊಂಡು, ದಿನದಾಂತ್ಯಕ್ಕೆ 222 ರನ್ ಗಳಿಸಿತು. ಗೋವಾ ಪರವಾಗಿ ಅರ್ಜುನ್ ತೆಂಡೊಲ್ಕರ್ 17 ಓವರ್​ ಎಸೆದು 3 ವಿಕೆಟ್ ಪಡೆದರೆ, ಕೌಶಿಕ್ 18 ಓವರ್​ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು.

ರಾತ್ರಿ ಮಳೆ ಬೀಳದೇ ಹೋದರೆ ನಾಳೆ ಕರ್ನಾಟಕ ತಂಡವು ರನ್ ಗಳಿಸಲು ಉತ್ತಮವಾದ ಅವಕಾಶ ಸಿಗುವ ಸಾಧ್ಯತೆಗಳಿವೆ. ಮೊದಲ ದಿನದಲ್ಲಿ 69 ಓವರ್​ಗಳು ಮಾತ್ರ ಎಸೆಯಲು ಸಾಧ್ಯವಾಯಿತು. ಮಳೆಯಿಂದಾಗಿ ಪಂದ್ಯವು ನಿಗದಿತ ಅವಧಿಗಿಂತ ತಡವಾಗಿ ಆರಂಭವಾಯಿತು.