ಬೇಲ್‌ನಲ್ಲಿರುವ ಶಾಸಕರ ಪುತ್ರ ನನ್ನ ಪ್ರಾಮಾಣಿಕತೆ ಪ್ರಶ್ನಿಸುತ್ತಿದ್ದಾರೆ: ನಲಪಾಡ್‌ಗೆ ರಮ್ಯಾ ತಿರುಗೇಟು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಪ್ರಶ್ನಿಸಿದ್ದಕ್ಕೆ ತಮ್ಮ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌ಗೆ ಟ್ವೀಟ್‌ ಮೂಲಕ ಕಾಂಗ್ರೆಸ್‌ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಮೊಹಮ್ಮದ್‌ ನಲಪಾಡ್‌ ಮೇಲಿರುವ ಆರೋಪದ ಸುದ್ದಿಗಳ ಫೋಟೋಗಳನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಶೇರ್‌ ಮಾಡಿರುವ ರಮ್ಯಾ, ನಲಪಾಡ್‌ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ನಟಿ ರಮ್ಯಾ ಕುರ್ಚಿಗೆ ಟವಲ್ ಹಾಕಲು ಬಂದಿದ್ದಾರೆ: ನಲಪಾಡ್ ಕಿಡಿ

ಈತ ಮೊಹಮ್ಮದ್‌ ನಲಪಾಡ್‌. ಗೌರವಾನ್ವಿತ ಶಾಸಕ ಹ್ಯಾರಿಸ್‌ ಅವರ ಪುತ್ರ. ಯುವ ಕಾಂಗ್ರೆಸ್ ಅಧ್ಯಕ್ಷರೂ ಕೂಡ. ಬೇಲ್‌ ಮೇಲೆ ಹೊರಗಿರುವ ನಲಪಾಡ್‌ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಿದ್ದಾರೆ ಎಂದು ಟ್ವೀಟ್‌ ಮಾಡಿ ಕುಟುಕಿದ್ದಾರೆ.

ಸಚಿವ ಡಾ. ಸಿ.ಎನ್.ಅಶ್ವಥ್‌ ನಾರಾಯಣ್‌ ಅವರನ್ನು ಶಾಸಕ ಎಂ.ಬಿ.ಪಾಟೀಲ್‌ ಗೌಪ್ಯವಾಗಿ ಭೇಟಿಯಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದರು. ಇದಕ್ಕೆ ರಮ್ಯಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಭೇಟಿಯಲ್ಲಿ ಸಮಸ್ಯೆ ಏನಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ರಮ್ಯಾ ವಿರುದ್ಧ ನಲಪಾಡ್‌ ಹರಿಹಾಯ್ದಿದ್ದರು. ರಮ್ಯಾ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ. ಇಷ್ಟು ತಿಂಗಳು ಇಷ್ಟು ವರ್ಷ ರಮ್ಯಾ ಎಲ್ಲಿದ್ದರು? ಎಲ್ಲಿಯೂ ಇಲ್ಲದ ರಮ್ಯಾ ಹಠಾತ್ ಯಾಕೆ ಬಂದರು? ಯಾವ ಕುರ್ಚಿಯ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರೆ ಎಂದು ಮೊಹಮ್ಮದ್ ನಲಪಾಡ್ ಉಡುಪಿಯಲ್ಲಿ ಟಾಂಗ್‌ ಕೊಟ್ಟಿದ್ದರು. ಇದನ್ನೂ ಓದಿ: ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ: ಡಿಕೆಶಿ ಕಾಲೆಳೆದ ಬಿಜೆಪಿ

Comments

Leave a Reply

Your email address will not be published. Required fields are marked *