ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ- ರಾಯಚೂರಿನಲ್ಲೂ ಅಲರ್ಟ್

ರಾಯಚೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ‌ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಅಧಿಕಾರಿಗಳು ಕಲಬುರಗಿಯಲ್ಲಿ ಬೀಡುಬಟ್ಟಿದ್ದು, ಇತ್ತ ರಾಯಚೂರಿನಲ್ಲೂ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.

ಪೊಲೀಸ್ ಇಲಾಖೆ 50 ವರ್ಷ ಪೂರೈಸುತ್ತಿರುವ ಹಿನ್ನೆಲೆ ಆಯೋಜಿಸಿದ್ದ ವಾಕಾಥಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಅಕ್ಕಪಕ್ಕದ ಜಿಲ್ಲೆಯಲ್ಲಿ ಶಂಕಿತ ಬಾಂಬರ್ ಓಡಾಟದ ಸುಳಿವು ಹಿನ್ನೆಲೆ ಜನರಲ್ಲಿ ಭದ್ರತೆ ಭಾವನೆ ಮೂಡಿಸಲು ಜಾಗ್ರತೆ ಜಾಥ ನಡೆಸಲಾಯಿತು.

ನಗರದ ಪೊಲೀಸ್‌ ಪರೇಡ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಡೆದ ವಾಕಾಥಾನ್‌ನಲ್ಲಿ ಸುಮಾರು 250 ಪೊಲೀಸ್ ಸಿಬ್ಬಂದಿ ಹಾಗೂ ಎನ್‌ಜಿಓ ಸದಸ್ಯರು ಭಾಗವಹಿಸಿದ್ದರು. 50 ವರ್ಷದ ಸಂಭ್ರಮಾಚರಣೆ ಜೊತೆಗೆ ಜಿಲ್ಲಾ ಪೊಲೀಸ್ ಅಲರ್ಟ್ ಆಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA

ಜನರಿಗೆ ನಿರ್ಭೀತಿಯಿಂದ ಇರಲು ಜಾಗೃತಿ ಮೂಡಿಸುತ್ತಿದ್ದೇವೆ. ಪೂರ್ವ ನಿಯೋಜಿತ ಸಿದ್ಧತೆಗಳನ್ನ ಮಾಡಿಕೊಂಡಿದ್ದೇವೆ. ಮೇಲಾಧಿಕಾರಿಗಳಿಂದ ಯಾವುದೇ ವಿಶೇಷ ಸಂದೇಶವಿಲ್ಲದಿದ್ದರೂ ಹೈಅಲರ್ಟ್‌ ಆಗಿದ್ದೇವೆ ಅಂತ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹೇಳಿದ್ದಾರೆ.