ಡಿಕೆಶಿ ಬರುತ್ತಿದ್ದಂತೆ ಬಳ್ಳಾರಿ ತೊರೆದ ರಮೇಶ್ ಜಾರಕಿಹೊಳಿ

ಬಳ್ಳಾರಿ: ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಪ್ರಚಾರಕ್ಕೆ ಬರುತ್ತಿದ್ದಂತೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲೆಯಿಂದ ಹೊರಗೆ ತೆರಳುವ ಮೂಲಕ ತಮ್ಮ ಗುದ್ದಾಟವನ್ನು ಬಳ್ಳಾರಿಯಲ್ಲೂ ಮುಂದುವರಿಸಿದ್ದಾರೆ.

ಹೌದು, ಡಿಕೆಶಿ ಬಳ್ಳಾರಿಗೆ ಬರುತ್ತಿದ್ದಂತೆ, ಜಿಲ್ಲೆಯಿಂದ ರಮೇಶ್ ಜಾರಕಿಹೋಳಿ ಹೊರ ನಡೆದಿದ್ದಾರೆ. ರಮೇಶ್ ರವರ ಅನುಪಸ್ಥಿತಿಯಲ್ಲೂ ಅವರ ಉಸ್ತುವಾರಿ ಕ್ಷೇತ್ರದಲ್ಲಿ ಡಿಕೆಶಿ ಪ್ರಚಾರ ನಡೆಸುತ್ತಿದ್ದಾರೆ.

ಬಳ್ಳಾರಿಯ ಉಪ ಚುನಾವಣೆಯಲ್ಲಿ ಸಚಿವ ರಮೇಶ್ ಜಾರಕಿಹೋಳಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೀಡಲಾಗಿತ್ತು. ಅಲ್ಲದೇ ಅವರು ಎರಡು ದಿನದ ಹಿಂದೆಯೇ ಬಂದು ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದರು. ಇಂದು ಸಂಜೆ ಕೂಡ ಕೂಡ್ಲಿಗಿಯ ಸಂತೆ ಮೈದಾನದಲ್ಲಿ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದ್ದರು. ಯಾವಾಗ ಶಿವಕುಮಾರ್ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರೋ, ರಮೇಶ್ ಬಳ್ಳಾರಿ ತೊರೆದಿದ್ದಾರೆ. ಇಂದು ಬೆಳಗ್ಗೆ ಕೂಡ್ಲಿಗಿ ಮುಖಂಡರಿಗೆ ಕರೆ ಮಾಡಿ, ಇನ್ನೂ ಎರಡು ದಿನ ಬಿಟ್ಟು ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಕೂಡ್ಲಿಗಿ ಕ್ಷೇತ್ರದಲ್ಲಿ ಏಕಾಂಗಿಯಾಗಿ ಪ್ರಚಾರ ಆರಂಭಿಸಿದ್ದರು. ಅಲ್ಲದೇ ರಮೇಶ್ ಜಾರಕಿಹೊಳಿ ಕರೆದಿದ್ದ ಸಭೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಡಿಕೆಶಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರನ್ನು ಆಹ್ವಾನಿಸಿ ಪರೋಕ್ಷವಾಗಿ ರಮೇಶ್ ಗೆ ಟಕ್ಕರ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಈ ಕುರಿತು ಮಾಧ್ಯಮಗಳು ಡಿಕೆಶಿಯವರನ್ನು ಪ್ರಶ್ನಿಸಿದಾಗ, ಚುನಾವಣಾ ಜವಾಬ್ದಾರಿಯನ್ನ ಕೆಪಿಸಿಸಿ ಅಧ್ಯಕ್ಷರು ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನೀವು ಅವರನ್ನೇ ಪ್ರಶ್ನೆ ಮಾಡಿ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *