ದಲಿತರೆಲ್ಲಾ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಿ: ಕೇಂದ್ರ ಸಚಿವ ಅಠಾವಳೆ

ಮುಂಬೈ: ಹಿಂದೂ ಧರ್ಮದಲ್ಲಿ ದಲಿತರಿಗೆ ನ್ಯಾಯ ಸಿಗುವ ಸಾಧ್ಯತೆ ಇಲ್ಲ, ಹಾಗಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಿ ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ನ್ಯಾಯ ಸಿಗಲ್ಲ ಎಂಬ ಮನವರಿಕೆಯಾದ ನಂತರ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ಅಂಬೇಡ್ಕರ್ ಅವರ ಮಾರ್ಗದಲ್ಲಿ ಲಕ್ಷಾಂತರ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಅಂತಾ ಅಂದಿದ್ದಾರೆ.

ಎಲ್ಲಾ ದಲಿತರು ತಮ್ಮ ಮೇಲಾಗುವ ದೌರ್ಜನ್ಯಗಳು ನಿಲ್ಲಬೇಕಾದರೆ ಹಿಂದೂ ಧರ್ಮ ಬಿಟ್ಟು, ಬೌದ್ಧ ಧರ್ಮ ಸ್ವೀಕರಿಸಿ ಎಂದು ಅಠಾವಳೆ ಸಲಹೆ ನೀಡಿದ್ದಾರೆ.

ಈ ಹಿಂದೆ ಮಂಗಳಮುಖಿಯರು ಪುರುಷನೂ ಅಲ್ಲ, ಮಹಿಳೆಯೂ ಅಲ್ಲ. ಆದರೆ ಅವರು ಸಹ ನಮ್ಮ ಹಾಗೆ ಮನುಷ್ಯರು. ಹೀಗಾಗಿ ಅವರು ಸೀರೆ ಉಡುವುದನ್ನು ನಾನು ಒಪ್ಪುವುದಿಲ್ಲ ಅಂತಾ ಅಠಾವಳೆ ಅಂದಿದ್ದರು. ಯಾರಾದ್ರೂ ವಂದೇ ಮಾತರಂ ಹಾಡಿಲ್ಲ ಎಂದರೆ ಅದು ತಪ್ಪಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದರು. ಅಷ್ಟೇ ಅಲ್ಲದೇ 2017ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಫಿಕ್ಸ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಹರಿಹಾಯುತ್ತಾ, ದೇಶದಲ್ಲಿ ಹಿಂದೂ ಧರ್ಮ ಸಂರಕ್ಷಕರು ಎಂದು ಹೇಳಿಕೊಳ್ಳವರಿಂದ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದ್ದರು.

Comments

Leave a Reply

Your email address will not be published. Required fields are marked *