ಶಾಲೆ ಬಿಟ್ಟ ಬಳಿಕ ಮೀನು ಹಿಡಿಯಲು ಹೋದ ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

ರಾಮನಗರ: ಶಾಲೆ ಬಿಟ್ಟ ಬಳಿಕ ಗೆಳೆಯರ ಜೊತೆ ಮೀನು ಹಿಡಿಯಲು ಹೋಗಿದ್ದ ವಿದ್ಯಾರ್ಥಿಯೋರ್ವ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಮನಗರದ ರಂಗರಾಯರದೊಡ್ಡಿ ಕೆರೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ರಾಮನಗರದ ನಾಗರಕಟ್ಟೆ ನಿವಾಸಿ ಮಂಜುಳಾ ಹಾಗೂ ಮಂಜುನಾಥ್ ದಂಪತಿಯ ಪುತ್ರ ಅರ್ಜುನ್ (13) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದಾನೆ.

ಮೃತ ದುರ್ದೈವಿ ಅರ್ಜುನ್ ರಾಮನಗರದಲ್ಲಿನ ಐಜೂರಿನ ಸರ್ಕಾರಿ ಕನ್ನಡ – ಉರ್ದು ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದ. ಇಂದು ಶನಿವಾರವಾಗಿದ್ದರಿಂದ ಮಧ್ಯಾಹ್ನದ ವೇಳೆಗೆ ಶಾಲೆಯಿಂದ ಹೊರಟ ಅರ್ಜುನ್ ತನ್ನ ಇಬ್ಬರು ಸ್ನೇಹಿತರ ಜೊತೆ ನೇರವಾಗಿ ರಾಯರದೊಡ್ಡಿ ಕೆರೆಗೆ ತೆರಳಿದ್ದಾನೆ. ಅಲ್ಲದೇ ಜೊತೆಯಲ್ಲಿ ಮೀನು ಹಿಡಿಯಲು ಗಾಳವನ್ನು ಸಹ ತೆಗೆದುಕೊಂಡು ಮೂವರು ಸ್ನೇಹಿತರು ಕೆರೆಗೆ ಹೋಗಿದ್ದರು.

ಕೆರೆಯ ದಡದಲ್ಲಿ ಮೀನಿಗೆ ಗಾಳ ಹಾಕಿಕೊಂಡು ಮೂರು ಜನ ಸ್ನೇಹಿತರು ಸಹ ಕುಳಿತಿದ್ದರು. ಈ ವೇಳೆ ಅರ್ಜುನ್ ಸ್ವಲ್ಪ ಮುಂದೆ ಹೋಗಿದ್ದು ಮೀನಿಗೆ ಗಾಳವನ್ನು ಹಿಡಿದು ಕುಳಿತಿದ್ದಾನೆ. ಈ ವೇಳೆ ಅರ್ಜುನ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಅರ್ಜುನ್ ಕೆರೆಯಲ್ಲಿ ಕಾಲು ಜಾರುತ್ತಿದ್ದಂತೆ ಆತನ ಜೊತೆಗಿದ್ದ ಸ್ನೇಹಿತರು ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ಕೆರೆಯ ಬಳಿ ಯಾರೂ ಇಲ್ಲದ ಕಾರಣ ಅರ್ಜುನ್‍ನನ್ನು ಬದುಕಿಸಲು ಸಾಧ್ಯವಾಗಿಲ್ಲ.

ಈ ಘಟನೆಯ ಬಳಿಕ ಅರ್ಜುನ್‍ನ ಸ್ನೇಹಿತರು ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಹೊರತೆಗೆದಿದ್ದಾರೆ. ಈ ಘಟನೆ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *