ಸೈನಿಕನಿಗೆ ಕೈತಪ್ಪಿದ ಸಚಿವಗಿರಿ- ಸಾಮಾಜಿಕ ಜಾಲತಾಣದಲ್ಲಿ ಡಿಕೆ-ಸಿಪಿವೈ ಬೆಂಬಲಿಗರ ಕಿತ್ತಾಟ

ರಾಮನಗರ: ಸಚಿವ ಸ್ಥಾನದಿಂದ ವಂಚಿತರಾದ ಸಿ.ಪಿ.ಯೋಗೇಶ್ವರ್ ವಿಚಾರವಾಗಿ ಇದೀಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಗರು ಹಾಗೂ ಸಿಪಿವೈ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರುವಾಗಿದ್ದು, ಜೋರಾಗಿಯೇ ಏಟು-ಎದಿರೇಟು ನೀಡುತ್ತಿದ್ದಾರೆ.

ಒಂದೆಡೆ ಸಚಿವರಾಗಿಯೇ ಬಿಟ್ಟರೆ ಎಂಬ ಭರದಲ್ಲಿ ಸಿ.ಪಿ.ಯೋಗೇಶ್ವರ್ ಬೆಂಬಗಲಿಗರು ಪೋಸ್ಟರ್, ಬ್ಯಾನರ್ ಗಳನ್ನು ಕಟ್ಟಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಇನ್ನೊಂದೆಡೆ ಇದನ್ನೇ ಲಾಭವನ್ನಾಗಿಸಿಕೊಂಡು, ಡಿ.ಕೆ.ಶಿವಕುಮಾರ್ ಬೆಂಬಲಿಗರು ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಇನ್ನಷ್ಟು ಸಿಟ್ಟಿಗೆದ್ದಿರುವ ಸಿಪಿವೈ ಅಭಿಮಾನಿಗಳು ಡಿಕೆಶಿ ವಿರುದ್ಧವೂ ಹರಿಹಾಯ್ದಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಇನ್ನೇನು ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆತೇಬಿಟ್ಟಿತ್ತು ಎಂಬ ನಂಬಿಕೆಯಲ್ಲಿ ಡಿಕೆಶಿ ಅಭಿಮಾನಿಗಳು ಹಾಕಿದ್ದ ಪೋಸ್ಟ್ ಗಳು ಮತ್ತೆ ಮುನ್ನಲೆಗೆ ಬಂದಿವೆ. ಸಚಿವ ಸ್ಥಾನ ಸಿಗುವ ಮೊದಲೇ ಬ್ಯಾನರ್ ಹಾಕಿದ್ದೀರಿ ಎಂದು ಸಿಪಿವೈ ಬೆಂಬಲಿಗರನ್ನು ಡಿಕೆಶಿ ಅಭಿಮಾನಿಗಳು ವ್ಯಂಗ್ಯವಾಡಿದ್ದರು. ಆದರೆ ಈಗ ಯೋಗೇಶ್ವರ್ ಬೆಂಬಲಿಗರು ಕೆಲ ಡಿಕೆಶಿ ಬೆಂಬಲಿಗರು ಹಾಕಿಸಿದ್ದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ನಿಮ್ಮ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷಗಿರಿ ಸಿಗುವ ಮೊದಲೇ ಪೋಸ್ಟರ್ ಹಾಕಿಸಿದ್ದೀರಾ? ಈಗ ನಮಗೆ ಪಾಠ ಹೇಳುತ್ತೀರಾ ಎಂದು ಡಿಕೆ ಫ್ಯಾನ್ಸ್ ಗೆ ಸಿಪಿವೈ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ.

ಬ್ಯಾನರ್ ವಿಚಾರಕ್ಕೆ ಈ ಇಬ್ಬರು ನಾಯಕರ ಬೆಂಬಲಿಗರ ವಾರ್ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಇಬ್ಬರಿಗೂ ಪಟ್ಟ ಕೈತಪ್ಪಿದ್ದು ನಾಯಕರಿಬ್ಬರು ಸುಮ್ಮನಾಗಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಕಚ್ಚಾಡುತ್ತಿರುವುದು ಸಾರ್ವಜನಿಕರವಾಗಿ ಸಾಕಷ್ಟು ಆಕ್ರೋಶಗಳು ಕಾರಣವಾಗಿದೆ.

Comments

Leave a Reply

Your email address will not be published. Required fields are marked *