ಫೈನ್ ಎಷ್ಟು ಕಟ್ಬೇಕು ಹೇಳು ಕಟ್ತೀನಿ-ಕುಡಿದು ಚಾಲಕನ ಗಲಾಟೆ

ರಾಮನಗರ: ನಶೆಯಲ್ಲಿ ಎಷ್ಟು ದಂಡ ಹೇಳಿ, ಕಟ್ಟಿ ಹೋಗ್ತೀನಿ ಎಂದು ಅವಾಜ್ ಹಾಕಿದ್ದ ಚಾಲಕ ಪೊಲೀಸರ ಅತಿಥಿಯಾಗಿದ್ದಾನೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಾಕಳಿ ನಿವಾಸಿ ಗಿರೀಶ್ ಗಲಾಟೆ ಮಾಡಿದ ಚಾಲಕ. ಗಿರೀಶ್ ಬಿಡದಿಯಲ್ಲಿ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ವಾಹನ ಚಲಾಯಿಸಿದ್ದಾನೆ. ಸಾರ್ವಜನಿಕರೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ಅವಾಜ್ ಹಾಕಿದ್ದಾನೆ. ಕೊನೆಗೆ ಸಾರ್ವಜನಿಕರು ನಶೆಯಲ್ಲಿ ಚಾಲಕನನ್ನು ರಾಮನಗರದ ಸಂಚಾರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿಯೂ ತನ್ನ ಮಂಗನಾಟ ನಿಲ್ಲಿಸದ ಗಿರೀಶ್, ಏನ್ ಇವಾಗ ನಾನ್ ಕುಡಿದಿದ್ದೇನೆ ಫೈನ್ ಎಷ್ಟ್ ಹೇಳು ಕಟ್ತೇನೆ ಅಂತಾ ಧಿಮಾಕು ತೋರಿಸಿದ್ದಾನೆ. ಅಲ್ಲದೇ ಠಾಣೆಯಲ್ಲೇ ಇದ್ದ ಕುರ್ಚಿಗಳನ್ನು ಎತ್ತಿ ಬಿಸಾಕಿದ್ದಾನೆ. ಈ ವೇಳೆ ಪೊಲೀಸರ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಅಲ್ಲದೇ ಕುಡಿದ ಕಿಕ್ ನಲ್ಲಿದ್ದ ಈತ ಬಟ್ಟೆಯನ್ನೆಲ್ಲ ಹರಿದುಕೊಂಡು ಪೊಲೀಸರಿಗೆ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಕೊನೆಗೆ ಹರಸಾಹಸ ಪಟ್ಟು, ಕುಡುಕ ಗಿರೀಶ್‍ನನ್ನು ಆಂಬೂಲೆನ್ಸ್ ಹತ್ತಿಸುವಷ್ಟರಲ್ಲಿ ಪೊಲೀಸರು ಹೈರಾಣಾಗಿದ್ದಾರೆ.

ಗಿರೀಶ್ ಬಿಗ್ ಬಾಸ್ಕೆಟ್ ಸೂಪರ್ ಮಾರ್ಕೆಟ್‍ನಲ್ಲಿ ಟಾಟಾ ಏಸ್ ವಾಹನದ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾನೆ. ಕುಡಿತದ ನಶೆಯಲ್ಲಿದ್ದ ಡ್ರೈವರ್ ಗಿರೀಶ್ ಸ್ಟೇಷನ್‍ನಲ್ಲಿ ಹ್ರೈಡ್ರಾಮ ನಡೆಸಿದ್ದಾನೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದಲ್ಲದೇ ಪೊಲೀಸರ ಮೇಲೂ ಸಹ ಹಲ್ಲೆ ನಡೆಸಿ ಸಿಕ್ಕಿಬಿದ್ದಿದ್ದಾನೆ.

Comments

Leave a Reply

Your email address will not be published. Required fields are marked *