ರಕ್ಷಿತ್ ಶೆಟ್ಟಿ ಮಾತಿಗೆ ‘ಹೌದೋ ಹುಲಿಯಾ’ ಎಂದ ಕುಂದಾನಗರಿ ಅಭಿಮಾನಿ

ಬೆಳಗಾವಿ: ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ನಟ ರಕ್ಷಿತ್ ಶೆಟ್ಟಿ ಭಾನುವಾರ ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ರಕ್ಷಿತ್ ಶೆಟ್ಟಿ ಅವರ ಮಾತಿಗೆ ಅಭಿಮಾನಿಯೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯಗೆ ನೀಡಿದ್ದ ಹೌದೋ ಹುಲಿಯಾ ಬಿರುದು ನೀಡಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಳಗಾವಿ ನಗರದ ಚಿತ್ರಾ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಕಂಡು ರಕ್ಷಿತ್ ಶೆಟ್ಟಿ ಖುಷಿ ವ್ಯಕ್ತಪಡಿಸಿದರು. ಈ ವೇಳೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಮಾತನಾಡಿ, ಕಲೆಯಲ್ಲಿ ಭಾಷೆ ವಿವಾದ ತರಬಾರದೆಂಬುದು ನನ್ನ ಅನಿಸಿಕೆ ಎಂದು ಹೇಳಿದರು. ಆಗ ಅಭಿಮಾನಿಯೊಬ್ಬ ‘ಹೌದೋ ಹುಲಿಯಾ’ ಎಂದು ಕೂಗಿ ಅಭಿಮಾನ ವ್ಯಕ್ತಪಡಿಸಿದ.

ಬಳಿಕ ಮಾತನಾಡಿದ ರಕ್ಷಿತ್ ಶೆಟ್ಟಿ ಅವರು, ಇಷ್ಟು ದೊಡ್ಡಮಟ್ಟದ ಪ್ರತಿಕ್ರಿಯೆ, ಪ್ರೋತ್ಸಾಹ ಸಿಗುತ್ತದೆ ಅಂತ ಕನಸು ಮನಸಿನಲ್ಲೂ ಯೋಚನೆ ಮಾಡಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ನಿರೀಕ್ಷೆಗೂ ಮೀರಿ ಚಿತ್ರ ಯಶಸ್ಸು ಕಂಡಿದೆ. ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಹೇಳಿದರು.

‘ಅವನೇ ಶ್ರೀಮನ್ನಾಯರಣ’ ಸಿನಿಮಾದ ಹಿಂದಿ ಡಬ್ಬಿಂಗ್ ಕಾರ್ಯ ನಡೆಯುತ್ತಿದ್ದು, ಮುಂದಿನ ವಾರ ತೆರೆ ಕಾಣಲಿದೆ. ಉತ್ತರ ಕರ್ನಾಟಕ ಶೈಲಿಯ ಚಿತ್ರ ಮಾಡುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಮಾಡುತ್ತೇನೆ ಎಂದು ತಿಳಿಸಿದರು.

ರಕ್ಷಿತ್ ಶೆಟ್ಟಿ ಅವರನ್ನು ನೋಡಲು, ಸೆಲ್ಫಿ ತಗೆದುಕೊಳ್ಳಲು ಕುಂದಾನಗರಿ ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ರಕ್ಷಿತ್ ಶೆಟ್ಟಿಗೆ ನಿರ್ದೇಶಕ ಸಚಿನ್, ನಟರಾದ ಬಾಲಾಜಿ, ಪ್ರಮೋದ್ ಶೆಟ್ಟಿ ಸಾಥ್ ನೀಡಿದರು.

Comments

Leave a Reply

Your email address will not be published. Required fields are marked *