ಬೆಂಗ್ಳೂರಲ್ಲಿ ಮನೆ ಮಾಡಿದ್ಮೇಲೆ ಮದ್ವೆ ಮಾತು: ರಕ್ಷಿತ್ ಶೆಟ್ಟಿ

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಅವನೇ ಶ್ರೀಮನ್ನಾಯಾರಣ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಇದರ ನಡುವೆಯೇ ರಕ್ಷಿತ್ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಾರಿದಾಡುತ್ತಿದ್ದು, ಈ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

ಮದುವೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಿತ್ ಶೆಟ್ಟಿ, ನನಗೆ ಒಪ್ಪಿಗೆಯಾಗುವ ಹುಡುಗಿ ಸಿಕ್ಕರೆ ಖಂಡಿತಾ ಆಗುತ್ತೇನೆ. ಆದರೆ ಈಗ ನನ್ನ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ನಾನ್ಸೆನ್ಸ್. ಸಿನಿಮಾ ಬಿಡುಗಡೆಯಾದ ಬಳಿಕ ನನ್ನ ಆಸೆ ಮೊದಲು ಬೆಂಗಳೂರಿನಲ್ಲಿ ಮನೆ ಮಾಡಬೇಕು. ಅದು ಆಗುವ ಹೊತ್ತಿಗೆ ಅಮ್ಮ ಯಾವುದಾದರೂ ಹುಡುಗಿ, ಹುಡುಕಿ ಇಟ್ಟಿದ್ದರೆ ಆಮೇಲೆ ಮದುವೆ ಮಾತು ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಸಿನಿಮಾ ಬಗ್ಗೆ ಕೇಳಿ ಬಂದ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿದ ರಕ್ಷಿತ್, ಮೊದಲು ಇಂತಹ ಟೀಕೆಗಳು ಬೇಸರ ಉಂಟುಮಾಡುತ್ತಿತ್ತು, ಆದರೆ ಈಗ ಪರಿಣಾಮ ಬೀರಲ್ಲ ಎಂದರು. ಅಲ್ಲದೇ ‘ದಿ ಬಲ್ಲರ್ ಆಫ್ ಬಸ್ಟರ್ ಕ್ರಗ್ಸ್’ ಸಿನಿಮಾದಂತಹ ಜಾನರ್ ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದ್ದರಿಂದ ಸಿನಿಮಾ ನೋಡಿದ ಮೇಲೆ ವಿಮರ್ಶೆಗಳು ಮಾಡಿದರೆ ಚೆನ್ನ ಎಂದರು.

ಇತ್ತ ನಟಿ ಶಾನ್ವಿ ಶ್ರೀವಾತ್ಸವ್ ಜೊತೆ ರಕ್ಷಿತ್ ಲವ್ ಎಂಬ ಗಾಸಿಪ್ ಹೆಚ್ಚಾಗಿತ್ತು. ಈ ಮಧ್ಯೆ ಅಭಿಮಾನಿಯೊಬ್ಬರು ಬೇಗ ಮದುವೆ ಮಾಡಿಕೊಳ್ಳಿ ಸರ್ ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಕ್ಷಿತ್, ಇಂತಹ ವಿಚಾರಗಳನ್ನು ಸುಮ್ಮನೆ ನಿರ್ಲಕ್ಷಿಸಿ ಮುಂದೆ ಸಾಗಿ ಎಂದಿದ್ದಾರೆ.

Comments

Leave a Reply

Your email address will not be published. Required fields are marked *