ನಿದ್ದೆ ಗುಂಗಲ್ಲಿ ಮಗುವನ್ನೇ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದ ತಾಯಿ!

ಜೈಪುರ: ರಾತ್ರಿ ವೇಳೆ ನಿದ್ದೆ ಗುಂಗಿನಲ್ಲಿ ತಾಯಿಯೊಬ್ಬರು 6 ತಿಂಗಳ ಮಗುವನ್ನು ನೀರಿನ ಟ್ಯಾಂಕಿನಲ್ಲಿ ಮುಳುಗಿಸಿ ಹತ್ಯೆಗೈದ ಭಯಾನಕ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

35 ವರ್ಷದ ಆರೋಪಿ ದೀಪಿಕಾ ಗುಜ್ಜಾರ್ ಈ ಕೃತ್ಯವೆಸೆಗಿದ್ದಾರೆ. ಈ ಘಟನೆಯೂ ಭಾನುವಾರ ನಡೆದಿದ್ದು, ತಾಯಿಯೇ ಆರೋಪಿ ಎನ್ನುವುದು ಮಂಗಳವಾರ ತಿಳಿದಿದೆ. ಭಾನುವಾರ ರಾತ್ರಿ ಪತಿ ಹಾಗೂ ಮಗುವಿನ ಜೊತೆ ಮನೆಯ ಎರಡನೇ ಮಹಡಿಯಲ್ಲಿ ಆರೋಪಿ ಮಲಗಿದ್ದಳು. ಆದೇನಾಯ್ತೋ ಗೊತ್ತಿಲ್ಲ. ರಾತ್ರಿ ನಿದ್ದೆಯಿಂದ ಎದ್ದ ಮಹಿಳೆ ಮಗುವನ್ನು ಎತ್ತುಕೊಂಡು ಹೋಗಿ ಎರಡನೇ ಮಹಡಿಯಯಲ್ಲಿರುವ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ, ತನ್ನ ಪಾಡಿಗೆ ವಾಪಸ್ ಬಂದು ಮಲಗಿದ್ದಾಳೆ.

ರಾತ್ರಿ 1.30 ಗಂಟೆ ಸುಮಾರಿಗೆ ಪತಿಗೆ ಎಚ್ಚರವಾದಾಗ ಮಗುವನ್ನು ಕಾಣದೆ ಗಾಬರಿಯಾಗಿದ್ದಾರೆ. ಈ ಬಗೆ ಪತ್ನಿ ಬಳಿ ಕೇಳಿದ್ದಾನೆ. ಆಕೆ ಕೂಡ ನನಗೆ ಗೊತ್ತಿಲ್ಲ ಎಂದಿದ್ದಾಳೆ. ನಂತರ ಮನೆಮಂದಿ ಎಲ್ಲರೂ ಸೇರಿ ರಾತ್ರಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅಜ್ಜಿಗೆ ನೀರಿನ ಟ್ಯಾಂಕ್‍ನಲ್ಲಿ ಮುಳುಗಿರುವ ಮಗು ಕಾಣಿಸಿದ್ದು, ಮಗುವನ್ನು ರಕ್ಷಿಸುವ ಮುನ್ನವೇ ಕಂದಮ್ಮ ಸಾವನ್ನಪ್ಪಿತ್ತು.

ಸೀತಾರಾಮ್ ಗುಜ್ಜಾರ್ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಆರೋಪಿ ತಾಯಿ ಗೃಹಿಣಿಯಾಗಿದ್ದರು. ಸೀತಾರಾಮ್ ದಂಪತಿ ಮನೆಯಲ್ಲಿ ಪೋಷಕರು ಹಾಗೂ ಅಜ್ಜಿ ಜತೆ ವಾಸವಾಗಿದ್ದರು. ಈ ಕೃತ್ಯದ ಬಗ್ಗೆ ಬೋರೆಖೇಡಾ ಪೊಲೀಸ್ ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದರು. ಆಗ ಪೊಲೀಸರು ವಿಚಾರಣೆ ನಡೆಸಿದಾಗ ತಾಯಿಯೇ ಕೊಲೆ ಮಾಡಿರುವುದು ತಿಳಿದು ಬಂದಿದ್ದು, 302ರ ಕಾಯ್ದೆಯ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಯಿಯೇ ಕೊಲೆ ಮಾಡಿರುವ ಬಗ್ಗೆ ತಿಳಿದ ಬಳಿಕ ಆಕೆಯನ್ನು ಪ್ರಶ್ನಿಸಿದಾಗ ನಿದ್ದೆಯಿಂದ ಎದ್ದಿದ್ದಾಗಲಿ, ಮಗುವನ್ನು ತೆಗೆದುಕೊಂಡು ಹೋಗಿ ನೀರಿನ ಟ್ಯಾಂಕ್‍ನಲ್ಲಿ ಹಾಕಿ ಬಂದ ವಿಚಾರ ನನಗೆ ಗೊತ್ತಾಗಲಿಲ್ಲ ಎಂದು ಹೇಳುತ್ತಿದ್ದಾಳೆ. ಆದರೆ ಈ ಕೃತ್ಯ ಎಸಗಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಸದ್ಯ ಈ ಬಗ್ಗೆ ಪೊಲೀಸರು  ತನಿಖೆ ನಡೆಸುತ್ತಿದ್ದು, ಆರೋಪಿಗೆ ಯಾವುದೇ ಮಾನಸಿಕ ಕಾಯಿಲೆ ಇಲ್ಲ ಎಂಬುದು ತಿಳಿದಿದೆ. ಅಲ್ಲದೆ ಈ ಹಿಂದೆ ಮಹಿಳೆಯ ಎರಡು ಮಕ್ಕಳು ಕೂಡ ತೀರಿಹೋಗಿದ್ದರು ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *