ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ – ಎನ್‌ಕೌಂಟರ್‌ನಲ್ಲಿ ಎಸ್‍ಐ ಹುತಾತ್ಮ, ನಾಲ್ವರು ನಕ್ಸಲರ ಹತ್ಯೆ

ರಾಯ್ಪುರ: ಛತ್ತೀಸ್‍ಗಢದ ರಾಜನಂದಗಾಂವ್ ಜಿಲ್ಲೆಯ ಮನ್ಪುರದಲ್ಲಿ ಎನ್‍ಕೌಂಟರ್ ನಡೆದಿದ್ದು, ನಕ್ಸಲರ ಜೊತೆಗೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬರು ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದು, ನಾಲ್ವರು ನಕ್ಸಲರು ಹತ್ಯೆಯಾಗಿದ್ದಾರೆ.

ಕಳೆದ ರಾತ್ರಿ ಮನ್ಪುರ ಪೊಲೀಸ್ ಠಾಣೆ ಸರಹದ್ದಿನ ಪರ್ದೊನಿ ಗ್ರಾಮದ ಸಮೀಪ ಎನ್‍ಕೌಂಟರ್ ನಡೆದಿದ್ದು, ಮದನ್ವಾಡ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಸ್.ಕೆ ಶರ್ಮ ಹುತಾತ್ಮರಾಗಿದ್ದಾರೆ. ಈ ಪ್ರದೇಶದಲ್ಲಿ ನಕ್ಸಲರು ಇದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆ ಜಿಲ್ಲಾ ಪೊಲೀಸರ ತಂಡ ಕಳೆದ ರಾತ್ರಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಸ್ಥಳವನ್ನು ಪೊಲೀಸರು ಸುತ್ತುವರಿಯುತ್ತಿದ್ದಂತೆ ನಕ್ಸಲರು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡಿನ ದಾಳಿ ನಡೆಸಿದರು. ಈ ವೇಳೆ ಪೊಲೀಸರು ಎನ್‍ಕೌಂಟರ್ ನಡೆಸಿದ್ದಾರೆ.

ಈ ಬಗ್ಗೆ ರಾಜ್ನಂದ್ ಗೌನ್ ಎಸ್‍ಪಿ ಜಿತೇಂದ್ರ ಶುಕ್ಲ ಅವರು ಮಾತನಾಡಿ, ಎನ್‌ಕೌಂಟರ್‌ನಲ್ಲಿ ನಮ್ಮ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ಇಬ್ಬರು ಮಹಿಳಾ ನಕ್ಸಲರು ಸೇರಿದಂತೆ ನಾಲ್ಕು ಮಾವೋವಾದಿಗಳ ಶವಗಳು, 1 ಎಕೆ-47 ರೈಫಲ್, 1 ಎಸ್‍ಎಲ್‍ಆರ್ ಶಸ್ತ್ರಾಸ್ತ್ರ ಮತ್ತು ಎರಡು ಬೋರ್ ರೈಫಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹುತಾತ್ಮ ಎಸ್‍ಐ ಎಸ್.ಕೆ ಶರ್ಮ ಅವರ ನೇತೃತ್ವದಲ್ಲಿಯೇ ಈ ಕಾರ್ಯಾಚರಣೆ ನಡೆದಿತ್ತು. ಮಹಾರಾಷ್ಟ್ರ ಗಡಿಯನ್ನು ಹಂಚಿಕೊಂಡಿರುವ ರಾಜ್ನಂದ್ ಗೌನ್ ಛತ್ತೀಸ್‍ಗಢದ ಮಾವೋವಾದಿ ಪೀಡಿತ ಜಿಲ್ಲೆಯಾಗಿದೆ. ಹೀಗಾಗಿ ಈ ಪ್ರದೇಶದ ಸುತ್ತಮುತ್ತ ನಕ್ಸಲರ ಹಾವಳಿ ಹೆಚ್ಚಾಗಿದೆ.

Comments

Leave a Reply

Your email address will not be published. Required fields are marked *