ಮಳೆಗಾಗಿ ಹೋಮ, ಪೂಜೆ ಮೊರೆ ಹೋದ ಕೊಡಗಿನ ಜನತೆ

ಮಡಿಕೇರಿ: ಜೂನ್ ಕಳೆದು ಜುಲೈ ಬಂದರೂ ಕೊಡಗಿಗೆ ವರುಣ ಕೃಪೆ ತೋರುತ್ತಿಲ್ಲ. ಹೀಗಾಗಿ ಕೊಡಗಿನಲ್ಲಿ ಉತ್ತಮ ಮಳೆಯಾಗಲಿ ಎಂದು ಜನ ಪೂಜೆ, ಹೋಮ ಹವನಗಳ ಮೊರೆ ಹೋಗಿದ್ದಾರೆ.

ಕೊಡಗಿನಲ್ಲಿ ಮಳೆ ಇಲ್ಲ ಎನ್ನುವ ಸುದ್ದಿ ಇಲ್ಲಿ ಮಾತ್ರವಲ್ಲ ರಾಜ್ಯ ಹಾಗೂ ನೆರೆ ರಾಜ್ಯದ ಜನರನ್ನೂ ಆತಂಕಕ್ಕೆ ದೂಡಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಹೋಮ, ಹವನಗಳು ಹೆಚ್ಚು ನಡೆಯುತ್ತಿದ್ದು, ಭಕ್ತಿಪೂರ್ವಕವಾಗಿ ಕರುಣೆ ತೋರು ಎಂದು ಜನ ಬೇಡುತ್ತಿದ್ದಾರೆ. ಕೊಡಗಿನಲ್ಲಿ ಕಳೆದ ಬಾರಿ ಅತೀವೃಷ್ಟಿ ಉಂಟಾಗಿ ಸಂಕಷ್ಟ ಎದುರಾಗಿತ್ತು. ಆದರೆ ಈ ಬಾರಿ ಕೊಡಗಿನ ಜನತೆಗೆ ಅನಾವೃಷ್ಟಿ ಕಾಡುತ್ತಿದೆ.

ಕೊಡಗಿನಾದ್ಯಂತ ವಾಡಿಕೆಯ ಮಳೆಯಾಗುತ್ತಿಲ್ಲ. ಇದರ ಎಫೆಕ್ಟ್ ಎಂಬಂತೆ ಜಿಲ್ಲೆಯ ಕೃಷಿ ಚಟುವಟಿಕೆ ಕುಂಠಿತಗೊಂಡು ರೈತರು ಆತಂಕದಲ್ಲಿದ್ದಾರೆ. ಜಿಲ್ಲೆಯ ನದಿ, ತೊರೆ, ಜಲಾಶಯಗಳು ಉಕ್ಕಿ ಹರಿಯದೇ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಹೀಗಾಗಿ ಜನ ಜಿಲ್ಲೆಯ ದೇವಾಲಯಗಳಲ್ಲಿ ಹೋಮ ಹವನ ನಡೆಸಿ ವರುಣ ದೇವನನ್ನು ಪ್ರಾರ್ಥಿಸುತ್ತಿದ್ದಾರೆ.

ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಕುಶಲ ಅರ್ಚಕರ ಸಂಘದ ವತಿಯಿಂದ ಕೊಡಗಿಗೆ ಉತ್ತಮ ಮಳೆಯಾಗಲಿ, ಮಳೆ ಅನಾಹುತ ಸಂಭವಿಸದಿರಲಿ ಎಂದು ಯಾಗ ನಡೆಸಲಾಯಿತು. 13 ಜನ ಅರ್ಚಕರಿಂದ ಯಾಗ ನಡೆಯಿತು. ಶತರುದ್ರ ಪಾರಾಯಣ, ರುದ್ರ ಹೋಮ ನೆರವೇರಿಸಿ ವರುಣ ದೇವ ಕೃಪೆ ತೋರು ಎಂದು ಪ್ರಾರ್ಥಿಸಲಾಯಿತು.

Comments

Leave a Reply

Your email address will not be published. Required fields are marked *