ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ- ರಾಜ್ಯದ ಹಲವೆಡೆ ಇಂದು ಮಳೆ

– ವರ್ಷದ ಮೊದಲ ಮಳೆ ಕಂಡು ಮಲೆನಾಡಿಗರಲ್ಲಿ ಸಂತಸ
– ನಾಳೆಯೂ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಆಗಿದ್ದು, ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರು ವರುಣನ ಸಿಂಚನದಿಂದ ಸಂತಸಗೊಂಡಿದ್ದಾರೆ.

ಮಳೆನಾಡು ಎಂದೇ ಖ್ಯಾತಿಯಾಗಿರೋ ಕಾಫಿನಾಡಲ್ಲಿ ವರ್ಷದ ಮೊದಲ ಮಳೆ ಸುರಿದಿದ್ದು ಮಲೆನಾಡಿಗರು ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಸುತ್ತಮುತ್ತ ಸುಮಾರು ಅರ್ಧಗಂಟೆಗಳ ಕಾಲ ಸಾಧಾರಣ ಮಳೆಯಾಗಿದ್ದು, ಮಲೆನಾಡಿಗರು ವರ್ಷದ ಮೊದಲ ಮಳೆ ಕಂಡು ಪುಳಕಿತರಾಗಿದ್ದಾರೆ. ಕಳೆದ ವರ್ಷ ಮಲೆನಾಡೇ ಅಲ್ಲೋಲ-ಕಲ್ಲೋಲವಾಗುವಂತಹಾ ಮಳೆ ಸುರಿದಿದ್ರೆ ಈ ವರ್ಷದ ಮಲೆನಾಡ ಉರಿ ಬಿಸಿಲಿಗೆ ಜನ ಹೈರಾಣಾಗಿದರು. ಕಾದ ಕಾವಲಿಯಂತಾಗಿದ್ದ ಮಲೆನಾಡಲ್ಲಿ ವರುಣದೇವನ ಆಗಮನ ಜನರಲ್ಲಿ ಸಂತಸ ತಂದಿದೆ.

ಜಿಲ್ಲೆಯ ಇತರೆ ಮಲೆನಾಡು ಭಾಗದಲ್ಲೂ ಮೋಡ ಕವಿದ ವಾತಾವರಣವಿದ್ದು, ಉಳಿದ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಆದರೆ ಮಳೆ ಕಂಡು ಕೆಲವರು ಸಂತಸ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರಲ್ಲಿ ಆತಂಕ ಕೂಡ ಮನೆ ಮಾಡಿದೆ. ಏಕೆಂದರೆ 2018 ಹಾಗೂ 2019ರ ಮಳೆ ನೆನೆದು ವರುಣದೇವ ಈ ವರ್ಷ ಮತ್ತಿನ್ನೇನು ಅವಾಂತರ ಸೃಷ್ಟಿಸುತ್ತಾನೋ ಎಂದು ಆತಂಕಕ್ಕೀಡಾಗಿದ್ದಾರೆ. ಕಳೆದ ವರ್ಷದ ಮಳೆಯಿಂದ ನಿರ್ಗತಿಕರಾದವರಿಗೆ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಈಗ ಮತ್ತೆ ಮಳೆ ಆರಂಭವಾಗಿದ್ದು, ಈ ವರ್ಷದ ಮಳೆರಾಯ ಹೇಗಿರ್ತಾನೋ ಎನ್ನುವ ಆತಂಕವನ್ನು ಮಲೆನಾಡಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಕೆಲ ಗಂಟೆಗಳಿಂದ ಎಡಬಿಡದೇ ಮಳೆ ಸುರಿದಿದ್ದು, ಇಳೆಗೆ ವರುಣ ತಂಪೆರೆದಿದ್ದಾನೆ. ಇನ್ನೂ ಮಳೆ ಸುರಿದಿದ್ದರಿಂದ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಇದೆ.

ರಾಜ್ಯದ ಹಲವೆಡೆ ಇಂದು ಹಾಗೂ ನಾಳೆ ಸಾಧಾರಣ ಮಳೆ ಆಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಪಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಸೇರಿದಂತೆ ಕೆಲವು ಭಾಗಗಳಿಲ್ಲಿ ಮಳೆ ಆಗಲಿದೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *