ಕೂಲ್ ಕೂಲ್ ಬೆಂಗ್ಳೂರಿನ ವಾತಾವರಣಕ್ಕೆ ಸಿಟಿ ಮಂದಿ ಫಿದಾ!

ಬೆಂಗಳೂರು: ಮನೆ ಹೊರಗೆ ಮೋಡ ಮುಸುಕಿದ ವಾತಾವರಣ. ಜೊತೆಗೆ ತುಂತುರು ಮಳೆಯ ಸಿಂಚನ. ಹಾಸಿಗೆ ಮೇಲಿಂದ ಎದ್ದು ಬರಲು ಆಗದೆ ಇರುವಷ್ಟು ಚಳಿ. ಬೆಂಗಳೂರು ನಗರದ ಮಂದಿಯನ್ನು ಈ ರೀತಿಯಲ್ಲಿ ಕಾಡುತ್ತಿರುವ ವಾತಾವರಣಕ್ಕೆ ಜನ ಫುಲ್ ಫಿದಾ ಆಗಿದ್ದಾರೆ. ಆದರೆ ಇದೇ ರೀತಿ ವಾತಾವರಣ ಮುಂದುವರಿದರೆ ಆರೋಗ್ಯದ ಮೇಲೆ ಪರಿಣಾಮವಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮವಾಗಿ ಉದ್ಯಾನ ನಗರಿಯಲ್ಲಿ ಮುಂಜಾನೆಯಿಂದ ತುಂತುರು ಮಳೆಯಾಗುತ್ತಿದೆ. ಬೆಳಗ್ಗೆ 10 ಗಂಟೆಯಾದರೂ ಮೋಡ ಮುಸುಕಿದ ವಾತಾವರಣದಿಂದ ಕೂಡಿದ್ದು, ತಣ್ಣನೆಯ ಗಾಳಿ, ಚಳಿಯ ಜೊತೆಗೆ ತುಂತುರು ಹನಿಗಳ ಸಿಂಚನವಾಗುತ್ತಿದೆ. ಇದು ಜನರಿಗೆ ನಾವು ಬೆಂಗಳೂರಿನಲ್ಲಿದ್ದೇವಾ ಅಥವಾ ಯಾವುದೋ ಮಲೆನಾಡಿನಲ್ಲಿದ್ದೇವಾ ಎನ್ನುವ ಅನುಭವವನ್ನು ಉಂಟು ಮಾಡಿದೆ.

ಈ ರೀತಿಯ ವಾತಾವರಣ ಇರುವುದರಿಂದ ಆರೋಗ್ಯದ ಮೇಲೆ ಬಹುಬೇಗ ಪರಿಣಾಮ ಬಿರುವ ಸಾಧ್ಯತೆ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದು, ತುಂತುರು ಮಳೆ, ಶೀತಗಾಳಿಯಿಂದ ಪ್ರಮುಖವಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಕುರಿತು ಸೂಚನೆ ನೀಡಿದ್ದಾರೆ. ಚಳಿಗಾಲದ ಮಳೆಯಲ್ಲಿ ನೆನೆಯುವುದರಿಂದ ನೆಗಡಿ, ಕೆಮ್ಮು, ಗಂಟಲು ನೋವು ಆರೋಗ್ಯದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವ ಲಕ್ಷಣಗಳಿದ್ದು, ಮಕ್ಕಳು ಮತ್ತು ವೃದ್ಧರು ಅದಷ್ಟು ಬೆಚ್ಚಗಿನ ವಾತಾವರಣದಲ್ಲಿ ಇರುವಂತೆ ನೋಡಿಕೊಳ್ಳಿ ಎಂದಿದ್ದಾರೆ.

ತುಂತುರು ಮಳೆಯ ಹವಾಮಾನ ಯುವ ಜನತೆಗೆ ಉಲ್ಲಾಸ ತಂದಿದೆ. ನಗರದಲ್ಲಿ ಇನ್ನು ಎರಡು ದಿನಗಳ ಕಾಲ ಹೀಗೆ ತುಂತುರು ಮಳೆ ಮತ್ತು ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲಸ ತೆರಳುವವರು ತುಂತುರು ಮಳೆಯಿಂದ ಸ್ವಲ್ಪ ಎಚ್ಚರ ವಹಿಸಿ ಕುಲ್ ಕುಲ್ ವಾತಾವರಣ ಎಂಜಾಯ್ ಮಾಡಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *