ಮಳೆಯ ನೀರಿನಲ್ಲಿ ಕೊಚ್ಚಿ ಹೋದ 14 ವರ್ಷದ ಬಾಲಕ

ಹಾವೇರಿ: ಮಳೆಯ ನೀರಿನಲ್ಲಿ 14 ವರ್ಷದ ಬಾಲಕ ಕೊಚ್ಚಿ ಹೋದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದಲ್ಲಿ ನಡೆದಿದೆ.

ಸೋಯೆಬ್ (14) ಕೊಚ್ಚಿ ಹೋದ ಬಾಲಕ. ಸೋಯೆಬ್ ರಾಣೇಬೆನ್ನೂರುನವನಾಗಿದ್ದು, ಭಾರೀ ಮಳೆಯಿಂದ ಹರಿಯುತ್ತಿರುವ ನೀರು ನೋಡಲು ನಿಂತಿದ್ದನು. ಈ ವೇಳೆ ಆತ ಕಾಲು ಜಾರಿ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾನೆ.

ದುರ್ಗಾದೇವಿ ಕೆರೆಗೆ ಹೋಗುವ ಕಾಲುವೆ ನೀರಲ್ಲಿ ಸೋಯೆಬ್ ಕೊಚ್ಚಿ ಹೋಗಿದ್ದಾನೆ. ಬಾಲಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಿರೇಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ರಾತ್ರಿಯಿಡಿ ಮಳೆ ಸುರಿದಿದ್ದು, ರಾಣೇಬೆನ್ನೂರು ನಗರದ ದೊಡ್ಡ ಕೆರೆ, ರಾಣೇಬೆನ್ನೂರು ತಾಲೂಕಿನ ಅಸುಂಡಿ ಕೆರೆ, ಯಕಲಾಸಪುರ ಕೆರೆ ಸೇರಿದಂತೆ ಜಿಲ್ಲೆಯ ಬಹುತೇಕ ಕೆರೆ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದೆ. ಸಾಕಷ್ಟು ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಅಲ್ಲದೆ ತಗ್ಗು ಪ್ರದೇಶದಲ್ಲಿನ ಮನೆಗಳಿಗೂ ನೀರು ನುಗ್ಗಿದ್ದು, ಜಿಲ್ಲೆಯ ಜನರು ವರುಣನ ಆರ್ಭಟಕ್ಕೆ ಹೈರಾಣಾಗಿದ್ದಾರೆ.

Comments

Leave a Reply

Your email address will not be published. Required fields are marked *