ನ್ಯಾಯ ಕೊಡಿಸಿ ಇಲ್ಲವೇ ಸಾಯಿಸಿ – ಅಧಿಕಾರಿಗಳ ಜೀಪಿಗೆ ಅಡ್ಡ ಮಲಗಿದ ಮಹಿಳೆ

– ನಿವೇಶನ ಹಂಚಿಕೆಯಲ್ಲಿ ಗೋಲ್‍ಮಾಲ್

ರಾಯಚೂರು: ನ್ಯಾಯ ಕೊಡಿಸಿ ಇಲ್ಲವೇ ಸಾಯಿಸಿ ಎಂದು ಮಹಿಳೆಯೊಬ್ಬರು ಅಧಿಕಾರಿಗಳ ಜೀಪಿಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತುಂಬಲಗಡ್ಡಿ ಗ್ರಾಮದಲ್ಲಿ ನಡೆದಿದೆ.

ತುಂಬಲಗಡ್ಡಿ ಪುನರ್ವಸತಿ ಪುನರ್ನಿಮಾಣ ಕೇಂದ್ರದಿಂದ ಮಂಜೂರಾಗಿದ್ದ ನಿವೇಶನವನ್ನ 26 ವರ್ಷಗಳಾದರೂ ನೀಡದ ಹಿನ್ನೆಲೆ ಮಹಿಳೆ ಕೆಬಿಜೆಎನ್‍ಎಲ್(ಕೃಷ್ಣ ಭಾಗ್ಯ ಜಲ ನಿಗಮ ಮಂಡಲಿ) ಅಧಿಕಾರಿಗಳ ಜೀಪಿಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1984ರಲ್ಲಿ ಬಸ್ಸಮ್ಮ ಅವರ ಪತಿ ಸಂಗಪ್ಪ ಹೆಸರಿಗೆ ಹಂಚಿಕೆಯಾಗಿದ್ದ ನಿವೇಶನವನ್ನ ನೀಡಲು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಅಧಿಕಾರಿಗಳು ಪ್ಲಾಟ್ ನಂ. 35ನ್ನು 34 ಎಂದು ಹೇಳಿ ಮೋಸ ಮಾಡುತ್ತಿದ್ದಾರೆ ಎಂದು ಬಸ್ಸಮ್ಮ ಆರೋಪಿಸಿದ್ದಾರೆ.

ಪತಿ ನಿಧನದ ಬಳಿಕ ಒಂಟಿಯಾಗಿ ನಿವೇಶನಕ್ಕಾಗಿ ಹೋರಾಟ ನಡೆಸಿರುವ ಬಸ್ಸಮ್ಮ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಬಡಾವಣೆಯ ಮೂಲ ನಕಾಶೆ ಮತ್ತು ದಾಖಲೆಗಳನ್ನೇ ಬದಲಾಯಿಸಿರುವ ಅಧಿಕಾರಿಗಳು ಒಂದೇ ನಿವೇಶನವನ್ನು ಇಬ್ಬರ ಹೆಸರಿಗೆ ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಹೀಗಾಗಿ ನನ್ನ ನಿವೇಶನ ನನಗೆ ಹುಡುಕಿಕೊಡಿ ಎಂದು ಬಸ್ಸಮ್ಮ ಹೋರಾಟ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *