ಮದುವೆಗೆ ಹೋಗಿದ್ದವರ ಮನೆಗೆ ಕನ್ನ- 2.85 ಲಕ್ಷ ರೂ., 220 ಗ್ರಾಂ ಚಿನ್ನಾಭರಣ ಕಳವು

– ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ರಾಯಚೂರು: ನಗರದ ಅಸ್ಕಿಹಾಳ ಬಳಿ ಕೃಷ್ಣಾ ಮೆಡೋಸ್ ಬಡಾವಣೆಯ ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಕಳ್ಳರು ಕೈ ಚಳಕ ತೋರಿಸಿದ್ದಾರೆ.

ವೆಂಕಟೇಶ್ವರರಾವ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, 2.85 ಲಕ್ಷ ರೂಪಾಯಿ ನಗದು ಹಾಗೂ 220 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಕಳ್ಳರು ಕೈ ಚಳಕ ತೋರಿದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೆಂಕಟೇಶ್ವರರಾವ್ ಅವರು ಕುಟುಂಬ ಸಮೇತ ಭಾನುವಾರ ರಾತ್ರಿ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದರು. ಈ ವೇಳೆ ಇಬ್ಬರು ಕಳ್ಳರು ಕಾಂಪೌಂಡ್ ಹಾರಿ ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಬಾಗಿಲು ಮುರಿದು ಒಳಗೆ ಹೋಗಿ, ಬೆಡ್ ರೂಮ್‍ನಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

ವೆಂಕಟೇಶ್ವರರಾವ್ ಅವರ ಪಕ್ಕದ ಮನೆಯವರು ಹೊರಗೆ ಬಂದು ನೋಡಿದಾಗ ಮನೆ ಬಾಗಿಲು ತೆರೆದಿದ್ದನ್ನು ನೋಡಿದ್ದಾರೆ. ಹೀಗಾಗಿ ವೆಂಕಟೇಶ್ವರರಾವ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಮದುವೆ ಮನೆಯಿಂದ ಬಂದ ವೆಂಕಟೇಶ್ವರರಾವ್ ನೋಡಿದಾಗ 2.85 ಲಕ್ಷ ರೂಪಾಯಿ ನಗದು ಹಾಗೂ 220 ಗ್ರಾಂ ಚಿನ್ನಾಭರಣವನ್ನು ದೋಚಿರುವುದು ಖಚಿತವಾಗಿದೆ.

ಈ ಕುರಿತು ವೆಂಕಟೇಶ್ವರರಾವ್ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಸಿಸಿಟಿವಿ ಕ್ಯಾಮೆರಾ ಫೂಟೇಜ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕಳ್ಳರು ಬಡಾವಣೆಯ ಖಾಲಿ ಮನೆಯಲ್ಲೂ ಕಳ್ಳತನಕ್ಕೆ ವಿಫಲಯತ್ನ ನಡೆದಿಸಿದ್ದರು. ಈ ಸಂಬಂಧ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *