ಡೆತ್ ನೋಟ್ ಬರೆದಿಟ್ಟು ಶಿಕ್ಷಕಿ ನೇಣಿಗೆ ಶರಣು

ರಾಯಚೂರು: ಜಿಲ್ಲೆಯ ಮಾನ್ವಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಡೆತ್ ನೋಟ್ ಬರೆದಿಟ್ಟು 33 ವರ್ಷದ ಶಾಲಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತಾಲೂಕಿನ ನಸ್ಲಾಪೂರು ಗ್ರಾಮದ ಶಿಕ್ಷಕಿಯಾಗಿರುವ ಶಾಲಿನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತಿ ಮೋಹನ್ ತಾಲೂಕಿನ ಕೊರವಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದಾನೆ. ಕಳೆದ ಒಂಬತ್ತು ವರ್ಷಗಳಿಂದ ದಂಪತಿ ಮಾನ್ವಿಯಲ್ಲಿ ಮನೆ ಮಾಡಿಕೊಂಡಿದ್ದರು.

ಘಟನೆ ಹಿನ್ನೆಲೆ ಶಾಲಿನಿ ತಂದೆ ಲಕ್ಷ್ಮಿಪುತ್ರಯ್ಯ ಮಗಳ ಸಾವಿಗೆ ಮೋಹನ್ ಹಾಗೂ ಅವನ ತಾಯಿ ತಂಗಿಯೇ ಕಾರಣ ಅಂತ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗಳಿಗೆ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಿದ್ದರು, ಅಳಿಯ ಮೋಹನ್ ಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು ಅಂತ ಆರೋಪಿಸಿದ್ದಾರೆ.

ಮೋಹನ್ ತಾನು ದುಡಿದ ದುಡ್ಡನ್ನೆಲ್ಲಾ ತಾಯಿ-ತಂಗಿಗೆ ಕೊಡುತ್ತಿದ್ದ, ಮಗಳಿಗೆ ಮೊದಲಿನಿಂದಲೂ ಹಿಂಸೆ ಕೊಡುತ್ತಿದ್ದರು ಅಂತ ಮತೃಳ ತಂದೆ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಾನ್ವಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಉತ್ತಮ ಶಿಕ್ಷಕ ಅಂತಲೇ ಹೆಸರು ಪಡೆದಿದ್ದ ಮೋಹನ್ ಕೊರವಿ ಗ್ರಾಮದ ಶಾಲೆಯ ಚಿತ್ರಣವನ್ನೇ ಬದಲಿಸಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

Comments

Leave a Reply

Your email address will not be published. Required fields are marked *