ಕಾಂಗ್ರೆಸ್, ಪಾಕಿಸ್ತಾನದ ಭಾಷೆ ಒಂದೇ ಆಗಿದೆ: ಪ್ರಹ್ಲಾದ್ ಜೋಶಿ

ರಾಯಚೂರು: ಪಾಕಿಸ್ತಾನದ ಭಯೋತ್ಪಾದನೆ ಮುಖವನ್ನು ವಿಶ್ವದ ಮುಂದೆ ನಿಲ್ಲಿಸುವ ಕೆಲಸ ಯಶಸ್ವಿಯಾಗಿ ನಡೆದಿದೆ. ಪಾಕ್ ನಲ್ಲಿನ ಅಸಹಿಷ್ಣುತೆ ಹಾಗೂ ಸರ್ಕಾರ ಅಲ್ಪ ಸಂಖ್ಯಾತರ ಮೇಲಿನ ನಡೆಸಿರುವ ಧಾರ್ಮಿಕ ಅತ್ಯಾಚಾರವನ್ನು ಜಗತ್ತಿಗೆ ತೋರಿಸಲು ಅವಕಾಶ ಇದೆ. ಆದರೆ ಕಾಂಗ್ರೆಸ್ಸಿನವರು ಪೌರತ್ವ ಕಾಯ್ದೆ (ಸಿಎಎ) ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ರಾಯಚೂರಿನಲ್ಲಿ ಆಯೋಜಿಸಿರುವ ಸಿಎಎ ಜಾಗೃತಿ ಜಾಥ ಆರಂಭಕ್ಕೂ ಮುನ್ನ ಮಾತನಾಡಿದ ಜೋಶಿ, ಕಾಂಗ್ರೆಸ್ಸಿನವರು ಸೋಲಿನಿಂದ ಕಂಗೆಟ್ಟಿದ್ದಾರೆ. ಮೋದಿಯನ್ನ ವಿರೋಧ ಮಾಡುತ್ತಾ ದೇಶದ ವಿರುದ್ಧ ಮಾತಾಡುತ್ತಿದ್ದಾರೆ. ಪಾಕಿಸ್ತಾನದ ಭಾಷೆ ಹಾಗೂ ಕಾಂಗ್ರೆಸ್ ಭಾಷೆ ಒಂದೇ ಆಗಿದೆ ಯಾಕೆ, ಪಾಕಿಸ್ತಾನವನ್ನು ಬೆತ್ತಲೆ ಮಾಡುವ ಅವಕಾಶಕ್ಕೆ ವಿರೋಧಿಸುತ್ತಿದ್ದೀರಿ ಯಾಕೆ ಅಂತ ಪ್ರಶ್ನಿಸಿದರು. ಪಾಕಿಸ್ತಾನದಲ್ಲಿ ಶೇ.22 ರಷ್ಟು ಇದ್ದ ಹಿಂದೂ ಅಲ್ಪಸಂಖ್ಯಾತರ ಜನಸಂಖ್ಯೆ ಶೇ.2ಕ್ಕೆ ಬಂದಿದೆ. ದೇಶಕ್ಕೆ ಲಕ್ಷಾಂತರ ಜನ ಅಕ್ರಮವಾಗಿ ನುಸುಳಿ ಬಂದಿದ್ದಾರೆ. ಅವರ ಬಗ್ಗೆ ಚಕಾರವೆತ್ತುತ್ತಿಲ್ಲ. ಕಾಂಗ್ರೆಸ್ಸಿನವರು ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.

ಮಾಜಿ ಸಚಿವ ಯು.ಟಿ ಖಾದರ್ ಅವರೇ ಸಿಎಎ ಬಿಲ್ ಬಂದ ನಂತರ ನಿಮಗೆ ಏನಾದರೂ ತೊಂದರೆಯಾಗಿದೆಯಾ. ನಿಮ್ಮ ಉದ್ದೇಶ ಏನು ಅನ್ನೋದನ್ನ ಸ್ಪಷ್ಟಪಡಿಸಬೇಕು. ಪಾಕಿಸ್ತಾನ ಯಾವ ಅಲ್ಪಸಂಖ್ಯಾತರನ್ನ ಸುರಕ್ಷಿತವಾಗಿ ನೋಡಿಕೊಂಡಿದೆ. ಇದು ಪೌರತ್ವ ಕೊಡಲು ಇರುವ ಕಾನೂನು, ಕಿತ್ತುಕೊಳ್ಳುವ ಕಾನೂನು ಅಲ್ಲ ಎಂದರು. ಕುಮಾರಸ್ವಾಮಿ ಸಿ.ಡಿ ಬಿಡುಗಡೆ ಬಗ್ಗೆ ಸಿಎಂ ಹಾಗೂ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕುಮಾರಸ್ವಾಮಿಯವರದ್ದು ಹಿಟ್ ಆ್ಯಂಡ್ ರನ್ ನಡೆ. ಪೊಲೀಸರು ಪರಿಸ್ಥಿತಿಗೆ ಅನುಗುಣವಾಗಿ ಕ್ರಮಕೈಗೊಂಡಿದ್ದಾರೆ. ಪೊಲೀಸರು ಕ್ರಮ ಕೈಗೊಂಡರೆ ಅವರ ವಿರುದ್ಧ ನಿಲ್ಲುವುದು ಸರಿಯಲ್ಲ ಎಂದು ಜೋಶಿ ಹೇಳಿದರು.

ಆಂಧ್ರದ ಕರ್ನೂಲ್ ರಾಜ್ಯಕ್ಕೆ ಸೇರಿಸುವ ವಿಚಾರ ಸರಿಯಿದೆ. ಆದರೆ ಗಡಿ ವಿವಾದಗಳು ಬಹಳ ಇವೆ. ಅಭಿವೃದ್ಧಿ ಕಡೆ ಗಮನ ಕೊಡುವುದು ಒಳಿತು ಎಂದರು. ಜಗತ್ತಿನ ನಾಲ್ಕನೆ ಹೆಚ್ಚು ಕಲ್ಲಿದ್ದಲು ಸಂಪನ್ಮೂಲ ಹೊಂದಿರುವ ದೇಶ ಭಾರತ ಆದರೆ ಕೋಲ್ ಇಂಡಿಯಾದಿಂದ ದೇಶದ ಎಲ್ಲಾ ಅವಶ್ಯಕತೆ ಪೂರೈಸಲು ಸಾಧ್ಯವಿಲ್ಲ. 2024 ಕ್ಕೆ ಕೋಲ್ ಇಂಡಿಯಾ 1 ಬಿಲಿಯನ್ ಟನ್, ಉಳಿದ ಮೂಲಗಳಿಂದ 1500 ಮಿಲಿಯನ್ ಟನ್ ಉತ್ಪಾದನೆ ಮಾಡಬೇಕು ಅನ್ನೋ ಗುರಿ ಹೊಂದಲಾಗಿದೆ ಎಂದು ಜೋಶಿ ತಿಳಿಸಿದರು.

Comments

Leave a Reply

Your email address will not be published. Required fields are marked *