ಲಾಕ್‍ಡೌನ್ ವಿಸ್ತರಣೆಯ ಎಫೆಕ್ಟ್ – ಮದ್ಯದಂಗಡಿ ಕಳ್ಳತನ

– ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಷೇಧವಿದೆ. ಹೀಗಾಗಿ ಎಲ್ಲಾ ಬಾರ್‍ಗಳು ಬಂದ್ ಆಗಿವೆ. ಆದರೆ ರಾಯಚೂರಿನಲ್ಲಿ ಮದ್ಯ ಸಿಗದ ಹಿನ್ನೆಲೆಯಲ್ಲಿ ಕೆಲವರು ಬಾರ್‍ಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮದ್ಯ ಕದ್ದಿದ್ದು, ಅಂಗಡಿಯಲ್ಲಿನ ಉಳಿದ ವಸ್ತುಗಳು ಹಾಗೇ ಬಿಟ್ಟಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಗರದ ಅಸ್ಕಿಹಾಳ ಬಳಿಯ ಶ್ರೀರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಳ್ಳತನವಾಗಿದೆ. ಕಳೆದ 20 ದಿನಗಳಿಂದ ಮದ್ಯ ಸಿಗದೇ ಕಂಗೆಟ್ಟ ಮದ್ಯ ಪ್ರಿಯರಿಂದ ಮದ್ಯದಂಗಡಿ ಕಳ್ಳತನವಾಗಿರುವ ಶಂಕೆಯಿದೆ. ವೆಂಕಟೇಶ್‍ಗೌಡ ಅವರಿಗೆ ಸೇರಿದ ರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್‍ನ ಹಿಂದಿನ ಬಾಗಿಲು ಮುರಿದು ಮದ್ಯದ ಬಾಕ್ಸ್ ಗಳನ್ನು ಕಳ್ಳತನ ಮಾಡಲಾಗಿದೆ.

ಹಿಂದಿನ ಬಾಗಿಲನ್ನು ಮುರಿದು ಒಳಬಂದ ಇಬ್ಬರು ಕಳ್ಳರು, ಮದ್ಯದ ಕೌಂಟರ್‍ಗೆ ತೆರಳು ಚಾವಣಿಯ ಸಿಮೆಂಟ್ ಸೀಟ್ ಗಳನ್ನ ಹೊಡೆದು ಲಕ್ಷಾಂತರ ರೂ. ಬೆಲೆ ಬಾಳುವ ಮದ್ಯ ಕಳ್ಳತನ ಮಾಡಿದ್ದಾರೆ. ಕಳ್ಳತನ ದೃಶ್ಯ ಸೆರೆಯಾಗಬಾರದು ಎಂದು ಮದ್ಯದಂಗಡಿಯ ಸಿಸಿ ಕ್ಯಾಮೆರಾಗಳ ಒಂದು ಮಾನಿಟರ್ ಅನ್ನು ಜಖಂಗೊಳಿಸಿ ಕೃತ್ಯ ಎಸಗಿದ್ದಾರೆ. ಪಶ್ಚಿಮ ಠಾಣೆ ಹಾಗೂ ಅಬಕಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಘಟನೆ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *