ಪ್ರಾಣಭಯ ಬಿಟ್ಟು ಪ್ರವಾಹದಲ್ಲೂ ನದಿ ದಾಟುತ್ತಿದ್ದಾರೆ ಜನ

ರಾಯಚೂರು: ಕೃಷ್ಣಾ ನದಿಯಲ್ಲಿ 9.08 ಲಕ್ಷ ಕ್ಯೂಸೆಕ್ ನೀರು ಹರಿವಿನ ಪ್ರವಾಹದಲ್ಲೂ ಜನ ಪ್ರಾಣ ಭಯ ಬಿಟ್ಟು ದಾಟುತ್ತಿದ್ದಾರೆ.

ರಾಯಚೂರಿನ ಕುರ್ವಕುಲ, ಕುರ್ವಕುರ್ದ ನಡುಗಡ್ಡೆ ಜನ ಆಹಾರ ಸಾಮಾಗ್ರಿ, ಔಷಧಿಗಾಗಿ ನಡುಗಡ್ಡೆಯಿಂದ ಹೊರ ಬರುತ್ತಿದ್ದಾರೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಅರಗೋಲಿನಲ್ಲಿ ಓಡಾಟ ನಡೆಸಿದ್ದಾರೆ. ಪ್ರವಾಹವನ್ನೂ ಲೆಕ್ಕಿಸದೇ ಆತ್ಕೂರು, ಡಿ.ರಾಂಪುರಕ್ಕೆ ಜನ ಬಂದು ಹೋಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

ಎನ್.ಡಿ.ಆರ್.ಎಫ್ ಹಾಗೂ ಪೊಲೀಸರು ನಮ್ಮನ್ನು ಓಡಾಡಲು ಬಿಡುತ್ತಿಲ್ಲ ಎಂದು ಜನರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷ ಬೋಟ್ ಸೌಲಭ್ಯವನ್ನೂ ಮಾಡುತ್ತಿಲ್ಲ, 15 ದಿನಗಳಿಂದ ಹೊರ ಬಂದವರು ನಡುಗಡ್ಡೆಗೆ ಹೋಗಿಲ್ಲ. ಜಿಲ್ಲಾಧಿಕಾರಿ ಆದೇಶ ಹಿನ್ನೆಲೆಯಿಂದಾಗಿ ನದಿಯಲ್ಲಿ ಅರಗೋಲು ಓಡಾಟ ನಿಷೇಧ ಮಾಡಲಾಗಿದೆ. ಆದರೂ ನಮ್ಮನ್ನು ಹೋಗಲು ಬಿಡಿ ಎಂದು ಜನ ಪಟ್ಟುಹಿಡಿದಿದ್ದಾರೆ.

ಇಷ್ಟು ನೀರಲ್ಲಿ ಹಿಂದೆಲ್ಲ ಓಡಾಡಿದ್ದೇವೆ ಎಂದು ಜನರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಡುಗಡ್ಡೆಯಿಂದ ಹೊರಬಂದವರು ಮರಳಿ ಹೋಗಲು ಪರದಾಡುತ್ತಿದ್ದಾರೆ. ಎರಡೂ ನಡುಗಡ್ಡೆಗಳು ಸೇರಿ 180 ಮನೆಗಳಿದ್ದು ಸುಮಾರು 2,100 ಮಂದಿ ವಾಸವಾಗಿದ್ದಾರೆ.

Comments

Leave a Reply

Your email address will not be published. Required fields are marked *