ಪಾತಾಳಕ್ಕೆ ಕುಸಿದ ತರಕಾರಿ ಬೆಲೆ- ಗ್ರಾಹಕರಿಗೆ ಫ್ರೀಯಾಗಿ ಹಂಚಿದ ರೈತರು

-ಟೊಮೆಟೋ, ಬದನೆಕಾಯಿ, ಹೂಕೋಸು ಬೆಳೆದ ರೈತರಿಗೆ ಭಾರೀ ನಷ್ಟ

ರಾಯಚೂರು: ಜಿಲ್ಲೆಯಲ್ಲಿ ತರಕಾರಿಗಳ ದರ ಪಾತಾಳಕ್ಕೆ ಕುಸಿದಿದ್ದು, ಏಕಾಏಕಿ ಬೆಲೆ ಇಳಿಕೆಯಾಗಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿ ತರಕಾರಿಗಳನ್ನ ಮಾರುಕಟ್ಟೆಯಲ್ಲಿ ಉಚಿತವಾಗಿ ಹಂಚಿ ಮನೆಗೆ ಹೋಗಿದ್ದಾರೆ.

ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ರಾಯಚೂರು ಸುತ್ತಮುತ್ತಲಿನ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಿಂದ ರೈತರು ತರಕಾರಿ ಮಾರಾಟಕ್ಕಾಗಿ ಬರುತ್ತಾರೆ. ಈಗ ಟೊಮೆಟೊ, ಬದನೆಕಾಯಿ ಹಾಗೂ ಹೂವು ಕೋಸು ದರ ಇಳಿಕೆಯಾಗಿದೆ, ಟೊಮೆಟೊ 2 ರೂಪಾಯಿ ಕೆಜಿ, ಬದನೆಕಾಯಿ 5 ರೂಪಾಯಿ ಕೆಜಿ ಹಾಗೂ ಹೂವು ಕೋಸು 10 ರೂಪಾಯಿ ಕೆಜಿಗೆ ಇಳಿದಿದೆ.

ತರಕಾರಿ ಬೆಳೆಯಲು ಸಾಕಷ್ಟು ಖರ್ಚು ಮಾಡಿ ಮಾರುಕಟ್ಟೆಗೆ ತಂದರೆ ದರ ಇಳಿಕೆಯಿಂದಾಗಿ ತರಕಾರಿ ತಂದ ವಾಹನದ ಬಾಡಿಗೆಯೂ ಬರುತ್ತಿಲ್ಲ. ಇದರಿಂದ ಬೇಸತ್ತ ರೈತರು ಇಂದು ಮಾರುಕಟ್ಟೆಯಲ್ಲಿ ತರಕಾರಿಯನ್ನು ಗ್ರಾಹಕರಿಗೆ ಫ್ರೀಯಾಗಿ ಹಂಚಿದರೆ ಕೆಲವರು ನೆಲಕ್ಕೆ ಹಾಕಿ ಹೋಗಿದ್ದಾರೆ. ಇನ್ನೂ ಕೆಲವರು ಜಾನುವಾರುಗಳಿಗೆ ಹಾಕಿದ್ದಾರೆ.

ರಾಯಚೂರು ಮಾರುಕಟ್ಟೆಗೆ ಆಂಧ್ರ ಹಾಗು ತೆಲಂಗಾಣದಿಂದ ರೈತರು ತರಕಾರಿ ತರುತ್ತಿರುವದರಿಂದ ಸ್ಥಳೀಯ ರೈತರಿಗೆ ದರ ಸಿಗುತ್ತಿಲ್ಲ. ಹೀಗಾಗಿ ತರಕಾರಿಗಳನ್ನು ಸಂಗ್ರಹಿಸಲು ಶೀತಾಗಾರ ಬೇಕು ಹಾಗೂ ಮಾರುಕಟ್ಟೆ ಸ್ಥಿರವಾಗಿರಲು ಸರ್ಕಾರ ತರಕಾರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *