ಎಚ್‍ಡಿಡಿ ವಿಗ್ರಹ ನಿರ್ಮಿಸಿ ನಿತ್ಯವೂ ಪೂಜೆ- ಅಭಿಮಾನ ಮೆರೆದ ರೈತ

ರಾಯಚೂರು: ಕೃಷ್ಣ ನದಿ ನೀರನ್ನು ನಾರಾಯಣಪುರ ಬಲದಂಡೆ ನಾಲೆ ಯೋಜನೆಯ ಮೂಲಕ ಜಿಲ್ಲೆಯ ದೇವದುರ್ಗ ತಾಲೂಕಿಗೆ ಹರಿಸಿದ್ದರಿಂದ ಸಾವಿರಾರು ರೈತರ ಜಮೀನುಗಳು ಹರಿಸಿನಿಂದ ನಳನಳಿಸುತ್ತಿವೆ. ಇದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕೊಡುಗೆ ಅಂತಲೇ ತಾಲೂಕಿನ ಜನ ಈಗಲೂ ನೆನೆಯುತ್ತಾರೆ. ಆದರೆ ರೈತರೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ಜಮೀನಿನಲ್ಲಿ ಎಚ್.ಡಿ.ದೇವೇಗೌಡರ ವಿಗ್ರಹ ನಿರ್ಮಿಸಿ ನಿತ್ಯವೂ ಪೂಜೆ ಮಾಡುತ್ತಿದ್ದಾರೆ.

ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದ ರೈತ ಪ್ರಭುರೆಡ್ಡಿ ಕೊಳ್ಳೂರು ಅವರು ಎಚ್.ಡಿ.ದೇವೆಗೌಡ ಅವರ ಮೂರ್ತಿ ಸ್ಥಾಪಿಸಿ ಅಭಿಮಾನ ಮೆರೆದಿದ್ದಾನೆ. ಅಷ್ಟೇ ಅಲ್ಲದೆ ಪುತ್ಥಳಿ ಮೇಲೆ ಭಾರತ ರತ್ನ, ಕನ್ನಡದ ಕಣ್ಮಣಿ, ದೇವದುರ್ಗ ತಾಲೂಕಿನ ದೊರೆ ಅಂತ ಬಿರುದುಗಳನ್ನು ಬರೆಸಿದ್ದಾನೆ.

ಕೃಷ್ಣ ನದಿ ನೀರನ್ನು ಎನ್‍ಆರ್‍ಬಿಸಿ ಯೋಜನೆಯ ಮೂಲಕ ತಾಲೂಕಿಗೆ ನೀಡಿದ್ದಕ್ಕಾಗಿ ಹಾಗೂ ಅವರ ಮೇಲಿನ ಅಭಿಮಾನದಿಂದ ಈ ಪುತ್ಥಳಿಯನ್ನ 4.80 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದೇನೆ. 2017ರಲ್ಲಿ ಮೂರ್ತಿ ಸ್ಥಾಪನೆ ಆರಂಭಿಸಲಾಗಿತ್ತು. ಆದರೆ ಕೆಲ ಅಡತಡೆಗಳಿಂದ ಸಂಪೂರ್ಣ ಆಗಿರಲಿಲ್ಲ. ಸದ್ಯ ಮೂರ್ತಿ ಸ್ಥಾಪನೆ ಕಾರ್ಯ ಪೂರ್ಣವಾಗಿದ್ದು, ನಿತ್ಯವೂ ಬೆಳಗ್ಗೆ ಹಾಗೂ ಸಂಜೆ ಸ್ವಚ್ಛಗೊಳಿಸಿ ಪೂಜಿಸುತ್ತೇವೆ ಎಂದು ಪ್ರಭುರೆಡ್ಡಿ ಹೇಳಿದ್ದಾರೆ.

ಎಚ್.ಡಿ.ದೇವೇಗೌಡ ಅವರ ಅಭಿಮಾನಿ ಪ್ರಭುರೆಡ್ಡಿ ಪುತ್ಥಳಿ ನಿರ್ಮಿಸಿರುವುದಲ್ಲದೆ ತಮ್ಮ ನೆಚ್ಚಿನ ನಾಯಕನಿಗೆ ಭಾರತ ರತ್ನ ಬಿರುದನ್ನು ನೀಡಿದ್ದಾನೆ. ರಾಜಕೀಯ ನಾಯಕರ್ಯಾರು ಪುತ್ಥಳಿ ಉದ್ಘಾಟನೆಗೆ ಆಗಮಿಸದಿದ್ದಕ್ಕೆ ಬೇಸರ ಮಾಡಿಕೊಳ್ಳದೆ, ಜನವರಿ 1ರಂದು ತಾವೇ ಉದ್ಘಾಟಿಸಿ ನಿತ್ಯವೂ ಪೂಜೆ ಮಾಡುತ್ತಲೇ ಅಭಿಮಾನ ಮೆರೆದಿದ್ದಾರೆ.

Comments

Leave a Reply

Your email address will not be published. Required fields are marked *