ಸಿಎಂ ತವರಲ್ಲಿಂದು ರಾಹುಲ್ ರೌಂಡ್ಸ್- 2 ದಿನ ಮೈಸೂರಲ್ಲಿದ್ರೂ ಸುತ್ತೂರಿಗೆ ಭೇಟಿ ಇಲ್ಲ

ಮೈಸೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ರಾಹುಲ್ ಗಾಂಧಿ ಇಂದು ಮೈಸೂರಿಗೆ ಆಗಮಿಸುತ್ತಿದ್ದಾರೆ.

ಇಂದು ಬೆಳಗ್ಗೆ 9 ಗಂಟೆಗೆ ಆಗಮಿಸಿ, ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಹುಲ್‍ಗೆ ಸಿಎಂ ಆದಿಯಾಗಿ ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ. ನಂತರ ಮಹಾರಾಣಿ ಕಾಲೇಜ್ ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿ, ಮಧಾಹ್ಯ 1 ಗಂಟೆಗೆ ಚಾಮರಾಜನಗರಕ್ಕೆ ತೆರಳಲಿದ್ದಾರೆ.

ಶಾಪಗ್ರಸ್ಥ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿರುವುದರಿಂದ ನನ್ನ ಲಕ್ ಬದಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ರಾಹುಲ್ ಗಾಂಧಿಯ ಲಕ್ ಬದಲಾಯಿಸೋಕೆ ಕರೆತರುತ್ತಿದ್ದಾರಾ ಎಂದು ಜನ ಚರ್ಚಿಸುತ್ತಿದ್ದಾರೆ. ಚಾಮರಾಜನಗರದಿಂದ ವಾಪಸ್ ಮೈಸೂರಿಗೆ ಬಂದು ಸರ್ಕಾರಿ ಗೆಸ್ಟ್ ಹೌಸ್‍ನಲ್ಲಿ ರಾಹುಲ್ ತಂಗಲಿದ್ದಾರೆ.

ಮಾರ್ಚ್ 25 ರಂದು ಬೆಳಗ್ಗೆ ಮೈಸೂರಿನ ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸುವ ರಾಹುಲ್, ನಂತರ ಮಂಡ್ಯ ಜಿಲ್ಲಾ ಪ್ರವಾಸಕ್ಕೆ ತೆರಳಲಿದ್ದಾರೆ. ಸಂಜೆ 4 ಗಂಟೆಗೆ ಮೈಸೂರಿಗೆ ಆಗಮಿಸಿ ರೋಡ್ ಶೋ ನಡೆಸಿ ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಹೀಗೆ ರಾಹುಲ್ ಗಾಂಧಿ ಎರಡು ದಿನ ಮೈಸೂರಿನಲ್ಲಿದ್ದರು ಸುತ್ತೂರು ಶ್ರೀ ಭೇಟಿಗೆ ಸಮಯ ನಿಗದಿ ಆಗದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮೊದಲಿಂದಲೂ ಸುತ್ತೂರು ಶ್ರೀಗಳು ಸಾತ್ವಿಕ ಮೌನ ತಳೆದಿದ್ದಾರೆ. ಈ ಕ್ಷಣದವರೆಗೂ ಲಿಂಗಾಯತ ಧರ್ಮದ ವಿಚಾರದಲ್ಲಿ ಯಾವ ಹೇಳಿಕೆಯನ್ನೂ ಶ್ರೀಗಳು ನೀಡಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಸ್ವಾಮೀಜಿಗಳ ವಿರೋಧ ಇತ್ತು ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *