ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ: ಜಗದೀಶ್ ಶೆಟ್ಟರ್

ಕೊಪ್ಪಳ: ರಾಹುಲ್ ಗಾಂಧಿ ಎಲ್ಲಿಯವರೆಗೂ ಕಾಂಗ್ರೆಸ್ ನಾಯಕನಾಗಿರುತ್ತಾನೋ, ಅಲ್ಲಿಯವರೆಗೆ ಕಾಂಗ್ರೆಸ್ ಉದ್ದಾರ ಆಗಲ್ಲ. ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷರಾಗಲು ರಾಹುಲ್ ಗಾಂಧಿ ನಾಲಾಯಕ್ ಆಗಿದ್ದಾರೆ. ಮೋದಿಯ ಬಗ್ಗೆ ರಾಹುಲ್ ಕೀಳು ಮಟ್ಟದ ಭಾಷೆ ಬಳಸೋದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕುಮಾರಸ್ವಾಮಿ ವಿರುದ್ಧವೂ ಹರಿಹಾಯ್ದ ಅವರು ಆಡಳಿತ ಬಿಟ್ಟು ಟೆಂಪಲ್ ರನ್ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಎಲ್ಲೆಲ್ಲಿ ದೇವಸ್ಥಾನಗಳಿವೆಯೋ ಅಲ್ಲೆಲ್ಲಾ ಹೋಗಿ ಭೇಟಿ ಮಾಡುತ್ತಿದ್ದಾರೆ. ಹೀಗಾದರೆ ಆಡಳಿತ ನಡೆಸುವವರು ಯಾರು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಸರ್ಕಾರದ ಮಂತ್ರಿಗಳೇ ಕಚ್ಚಾಡುತ್ತಿದ್ದಾರೆ. ಆದರೆ ಅಧಿಕಾರಕ್ಕಾಗಿ ಮುಖ್ಯಮಂತ್ರಿಗಳು ಮಾತ್ರ ದೇವಸ್ಥಾನವನ್ನು ಸುತ್ತಾಡುತ್ತಿದ್ದಾರೆ ಎಂದು ಖಾರವಾಗಿ ಮಾತನಾಡಿದರು.

ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಕುಳಿತು ಆಡಳಿತ ನಡೆಸುವವರು ಯಾರು? ರೇವಣ್ಣನವರೋ ಇಲ್ಲ ಬೇರೆಯಾರಾದ್ರೂ ನಡೆಸಬೇಕೋ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಶಾಸಕರ ಸಭೆ ಆಯ್ತು ಅಲ್ಲಿ ಅವರ ಬೆಂಬಲಿಗರೇ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಲು ಹೋದರೆ ಎರಡು ಮೂರು ತಾಸು ಕೈಯಿಗೆ ಸಿಗುವುದಿಲ್ಲ. ನಮ್ಮ ಕೆಲಸಗಳು ಯಾವುದು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *