ಯಾವುದೇ ಖಾತೆ ನೀಡದೆ ಸಚಿವ ಸ್ಥಾನ ಕೊಟ್ಟರೂ ನನಗೆ ಓಕೆ : ದೇಶಪಾಂಡೆ

ಬೆಂಗಳೂರು: ಖಾತೆ ಹಂಚಿಕೆಯ ವಿಚಾರವಾಗಿ ಕಾಂಗ್ರೆಸ್ ನಾಯಕರು ಹಾಗೂ ಸಚಿವರ ನಡುವೆ ಬಿಗ್ ಫೈಟ್ ಆರಂಭವಾಗಿದ್ದು, ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅವರು ನಯವಾಗಿ ಹಿಂದಕ್ಕೆ ಸರಿದಿದ್ದಾರೆ.

ವಿಧಾನಸೌಧದಲ್ಲಿ ನಡೆದ ಕಂದಾಯ ಇಲಾಖೆಯ ಸುದ್ದಿಗೋಷ್ಠಿಯ ಬಳಿಕ ಮಾತನಾಡಿದ ಸಚಿವರು, ನನ್ನ ಬಳಿ ಇರುವ ಯಾವುದೇ ಖಾತೆ ಹಿಂಪಡೆದರೂ ನನಗೆ ಬೇಜಾರಿಲ್ಲ. ನನಗೆ ಇಂತಹದ್ದೇ ಖಾತೆ ಕೊಡಿ ಅಂತ ನಾನು ಕೇಳಿರಲಿಲ್ಲ. ಯಾವುದೇ ಖಾತೆ ಕೊಟ್ಟರು ನಾನು ನಿಭಾಯಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಒಂದು ವೇಳೆ ಯಾವುದೇ ಖಾತೆ ನೀಡದೆ ಸಚಿವ ಅಂದ್ರು ನನಗೆ ಯಾವುದೇ ಸಮಸ್ಯೆ ಇಲ್ಲ ಅಂದ್ರು ಎಂದು ನಗೆ ಹರಿಸಿದ ಸಚಿವರು, ನನ್ನ ಬಳಿ ಇರುವ ಯಾವ ಖಾತೆಯನ್ನು ವಾಪಸ್ ಪಡೆಯಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ರಚನೆಯಾಗಿದ್ದರೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಇರುವುದರಿಂದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಬೆಳಗ್ಗೆಯಿಂದ ಸಭೆಯಲ್ಲಿದ್ದೇನೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಇಂದಿನ ಬೆಳವಣಿಗೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ದೇಶಪಾಂಡೆಗೆ ಕೈಗಾರಿಕಾ ಖಾತೆಯನ್ನು ಕೊಟ್ಟರೆ ಚೆನ್ನಾಗಿ ನಿಭಾಯಿಸುತ್ತಾರೆ. ಹೀಗಾಗಿ ಅವರಿಗೆ ಕೈಗಾರಿಕಾ ಖಾತೆ ಕೊಡಬೇಕು ಎಂದು ಜನರು ಹೇಳುತ್ತಾರೆ ಎನ್ನುವ ಮೂಲಕ ಕೆ.ಜೆ. ಜಾರ್ಜ್ ಖಾತೆಯ ಬಗ್ಗೆ ಆಸೆ ವ್ಯಕ್ತಪಡಿಸಿದ ಅವರು, ಎಲ್ಲ ಖಾತೆಗಳು ಉತ್ತಮವಾಗಿದ್ದು, ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಬಹುದು ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *