ಕ್ರಿಕೆಟ್ ವಿಚಾರಕ್ಕೆ ಕಲ್ಲು ತೂರಾಟ- ಪೊಲೀಸರು ಸೇರಿ 10 ಮಂದಿಗೆ ಗಾಯ

ಬೆಳಗಾವಿ(ಚಿಕ್ಕೋಡಿ): ಕ್ರಿಕೆಟ್ ಆಟದ ವಿಚಾರದಲ್ಲಿ ಬುಧವಾರ ರಾತ್ರಿ ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಸೇರಿದಂತೆ 10 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಪಕ್ಕದ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ನಗರದಲ್ಲಿ ನಡೆದಿದೆ.

ಎರಡು ಗುಂಪಿನ ನಡುವೆ ಘರ್ಷಣೆ ನಡೆಯುತ್ತಿದ್ದ ವೇಳೆ ತಡೆಯಲು ಬಂದ ಪೊಲೀಸರ ಮೇಲೂ ಕಲ್ಲು ತೂರಾಟ ಮಾಡಲಾಗಿದೆ. ಈ ಗಲಾಟೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ 10 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಲ್ಲದೆ ಗಲಾಟೆ ವೇಳೆ ಕಲ್ಲು ಹಾಗೂ ಗಾಜಿನ ಬಾಟಲಿಗಳ ಸುರಿಮಳೆಯೇ ಸುರಿದಿದೆ. ಒಂದು ಗುಂಪಿನ ಮೇಲೆ ಇನ್ನೊಂದು ಗುಂಪು ಪರಸ್ಪರ ಗಾಜು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಸುಮಾರು 10 ವಾಹನಗಳು ಕೂಡ ಜಖಂಗೊಂಡಿದೆ.

ಸದ್ಯ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಹಾಗೆಯೇ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *