ಮೀನಿನ ಬಲೆಗೆ ಬಿದ್ದ ಹೆಬ್ಬಾವು – ಗ್ರಾಮಸ್ಥರಿಂದ ರಕ್ಷಣೆ

ಮಂಡ್ಯ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಬಿದ್ದ ಹೆಬ್ಬಾವನ್ನು ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆ ಮದ್ದೂರು ತಾಲೂಕಿನ ಗೂಳೂರಿನಲ್ಲಿ ನಡೆದಿದೆ.

ಗೂಳೂರು ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬಿಡಲಾಗಿತ್ತು. ಆದರೆ ಮೀನು ಸಿಗುತ್ತದೆ ಎಂದು ಬಲೆಯನ್ನು ಪರೀಕ್ಷಿಸಿದವರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಬಲೆಯಲ್ಲಿ ಮೀನಿನ ಬದಲು ಹೆಬ್ಬಾವು ಸುತ್ತಿಕೊಂಡಿತ್ತು. ತಕ್ಷಣ ಬಲೆಯಿಂದ ಹೆಬ್ಬಾವನ್ನು ರಕ್ಷಿಸಿದ ಮೀನುಗಾರರು ಅರಣ್ಯ ಇಲಾಖೆಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

ಮೀನಿನ ಬದಲಿಗೆ ಹೆಬ್ಬಾವು ಸಿಕ್ಕಿದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲ ಗುಂಪಾಗಿ ಬಂದು ಹೆಬ್ಬಾವನ್ನು ನೋಡಿದ್ದಾರೆ. ಮಾಹಿತಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬಂದು ಮೀನುಗಾರರ ಬಳಿ ಹೆಬ್ಬಾವನ್ನು ತೆಗೆದುಕೊಂಡು ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ.

ಮೀನು ಹಿಡಿಯಲು ಬಲೆ ಹಾಕಿದ್ದೆವು. ಆದರೆ ಅದರಲ್ಲಿ ಹೆಬ್ಬಾವು ಸಿಲುಕಿಕೊಂಡಿತ್ತು. ಹೆಬ್ಬಾವು ಸುಮಾರು 25-30 ತೂಕವಿತ್ತು. ಬಳಿಕ ನಾವು ಬಲೆಯಿಂದ ಬಿಡಿಸಿಕೊಂಡು ಬಂದು ಗ್ರಾಮಕ್ಕೆ ತಂದಿದ್ದೆವು. ನಂತರ ಅರಣ್ಯ ಇಲಾಖೆಗೆ ಫೋನ್ ಮಾಡಿ ಹೆಬ್ಬಾವು ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ವಿ. ಅರಣ್ಯ ಸಿಬ್ಬಂದಿ ಬರುವರೆಗೂ ಹೆಬ್ಬಾವನ್ನು ನಾವೇ ಆಟ ಆಡಿಸುತ್ತಿದ್ವಿ. ಆದರೆ ಅದು ಯಾರಿಗೂ ಏನು ತೊಂದರೆ ಕೊಡಲಿಲ್ಲ. ಅರಣ್ಯ ಇಲಾಖೆಯವರು ಬಂದು ಕಾಡಿಗೆ ಬಿಡುತ್ತೇವೆ ಎಂದು ತೆಗೆದುಕೊಂಡು ಹೋದರು ಎಂದು ಸ್ಥಳೀಯ ನಾಗರಾಜು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *