ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪೊಲೀಸ್ ಮೇಲೆಯೇ ಕಾರು ಹತ್ತಿಸಿದ ಯುವಕ

– ಕಾರಿನ ಬ್ಯಾನೆಟ್ ಮೇಲೆ ಹಾರಿದ ಪೊಲೀಸ್
– ಆರೋಪಿ ತಂದೆ-ಮಗನ ವಿರುದ್ಧ ಪ್ರಕರಣ ದಾಖಲು

ಚಂಡೀಗಢ: ಪಾಸ್ ತೋರಿಸಿ ಎಂದು ನಿಲ್ಲಿಸಿದ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಯುವಕ ಕಾರು ಹತ್ತಿಸಿದ್ದು, ಕಾರಿನ ಬ್ಯಾನೆಟ್ ಮೇಲೆ ಹಾರಿ ಸಿಬ್ಬಂದಿ ಪ್ರಾಣ ಉಳಿಸಿಕೊಂಡ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

20 ವರ್ಷದ ಯುವಕ ಅನ್ಮೊಲ್ ಕಾರು ಓಡಿಸಿಕೊಂಡು ತನ್ನ ತಂದೆ ಪರ್ಮಿಂಧರ್ ಕುಮಾರ್ ಜೊತೆಯಲ್ಲಿ ಬರುತ್ತಿದ್ದ. ಈ ವೇಳೆ ಜಲಂಧರ್ ಚೆಕ್‍ಪೋಸ್ಟ್ ಬಳಿಯ ಮಿಲ್ಕ್ ಬಾರ್ ಚೌಕ್‍ನಲ್ಲಿ ಕಾರನ್ನು ತಡೆದ ಪೊಲೀಸರು ಪಾಸ್ ತೋರಿಸುವಂತೆ ಕೇಳಿದಾಗ ಯುವಕ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಅಲ್ಲದೇ ಅಲ್ಲೇ ನಿಂತಿದ್ದ ಎಎಸ್‍ಐ ಮುಲ್ಕ್ ರಾಜ್ ಮೇಲೆ ಕಾರು ಹತ್ತಿಸಿದ್ದಾನೆ. ಈ ವೇಳೆ ತಕ್ಷಣ ಎಚ್ಚೆತ್ತ ಎಎಸ್‍ಐ ಕಾರಿನ ಮೇಲೆ ಹಾರಿ ಬ್ಯಾನೆಟ್ ಹಿಡಿದುಕೊಂಡಿದ್ದಾರೆ. ಆಗ ಯುವಕ ಇನ್ನಷ್ಟು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಸ್ವಲ್ಪ ದೂರದವರೆಗೂ ಹಾಗೇ ಹೋಗಿ, ಬಳಿಕ ಕಾರು ನಿಲ್ಲಿಸಿದ್ದಾನೆ.

ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದಲ್ಲದೇ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಹಿನ್ನೆಲೆ ತಂದೆ-ಮಗ ಇಬ್ಬರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಈ ಬಗ್ಗೆ ತಿಳಿದ ಪಂಜಾಬ್ ಡಿಜಿಪಿ ಅವರು ಟ್ವೀಟ್ ಮಾಡಿ, ಈ ರೀತಿ ಕೃತ್ಯಗಳನ್ನು ಪಂಜಾಬ್ ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಈಗಾಗಲೇ ಆರೋಪಿ ಮಗ ಹಾಗೂ ತಂದೆಯನ್ನು ಬಂಧಿಸಿ, ಇಬ್ಬರ ಮೇಲೂ ಕೊಲೆ ಯತ್ನ ಪ್ರಕರಣದ ಜೊತೆ ಇತರೆ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿ ಅನ್ಮೊಲ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪೊಲೀಸರಿಂದ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಈ ತಪ್ಪು ಮಾಡಿದ್ದಾನೆ. ಆದರೆ ಎಎಸ್‍ಐ ಕಾರಿನ ಬ್ಯಾನೆಟ್ ಮೇಲೆ ಹಾರಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ ಎಂದು ಇತರೆ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *