ನಿಜವಾಗಲೂ ಭಗವಂತ ಪುನೀತ್‍ಗೆ ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ: ಚಿರಂಜೀವಿ

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಶುಕ್ರವಾರ ವಿಧಿವಶರಾಗಿದ್ದು, ಪುನೀತ್ ಅಂತಿಮ ದರ್ಶನ ಪಡೆಯಲು ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು.

ಪುನೀತ್ ಅಂತಿಮ ದರ್ಶನ ಪಡೆದು ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್‍ಕುಮಾರ್ ಕುಟುಂಬಕ್ಕೂ ಹಾಗೂ ನಮ್ಮ ಕುಟುಂಬಕ್ಕೂ ಬಹಳ ಉತ್ತಮ ಬಾಂಧವ್ಯ ಮತ್ತು ಅನುಬಂಧವಿದೆ. ಅವರ ಮನೆಯಲ್ಲಿ ಯಾವುದೇ ಸಮಾರಂಭ ನಡೆದರೂ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್ ಕುಮಾರ್ ವೈಯಕ್ತಿಕವಾಗಿ ನಮ್ಮ ಮನೆಗೆ ಆಗಮಿಸಿ ಆಹ್ವಾನಿಸುತ್ತಿದ್ದರು. ಹಾಗೆಯೇ ನಮ್ಮ ಮನೆಯಲ್ಲಿ ಕೂಡ ಯಾವುದೇ ಕಾರ್ಯಕ್ರಮ ನಡೆದರೂ ಅವರು ಪಾಲ್ಗೊಳ್ಳುತ್ತಿದ್ದರು. ಆದರೆ ಇಂದು ಯಾರು ಅಂದುಕೊಳ್ಳದೇ ಇದ್ದ ನಮ್ಮ ಅಪ್ಪು, ನಮ್ಮ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ ಹೊಂದಿದ್ದಾರೆ. ಇದು ದೊಡ್ಡ ಅನ್ಯಾಯ. ಬಹಳ ಬೇಸರವಾಗುತ್ತಿದೆ ಎಂದರು. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

ಪುನೀತ್ ಸಾವು ಜೀರ್ಣಿಸಿಕೊಳ್ಳಲು ಆಗದೇ ಇರುವಂತಹ ವಿಚಾರ. ನಿಜವಾಗಲೂ ಭಗವಂತ ಪುನೀತ್ ರಾಜ್‍ಕುಮಾರ್ ಅವರಿಗೆ ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ. ಯಾರು ವಿಧಿಯನ್ನು ಬೇಡ ಎಂದು ತಡೆಯಲು ಸಾಧ್ಯವಾಗುವುದಿಲ್ಲ. ಆ ಭಗವಂತ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ನೀಡಲಿ. ನಮ್ಮ ಪುನೀತ್ ರಾಜ್‍ಕುಮಾರ್ ಸ್ವರ್ಗದಲ್ಲಿ ಇರಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್

Comments

Leave a Reply

Your email address will not be published. Required fields are marked *