ಪುನೀತ್ ರಾಜ್‍ಕುಮಾರರಂತೆ ನೇತ್ರ ದಾನ ಮಾಡಲು ನೇಣಿಗೆ ಶರಣಾದ ಅಭಿಮಾನಿ!

ಆನೇಕಲ್: ನಟ ಪುನೀತ್ ರಾಜ್‍ಕುಮಾರ್ ಅವರಂತೆಯೇ ನಿಧನ ನಂತರ ತಾನೂ ನೇತ್ರ ದಾನ ಮಾಡುವುದಕ್ಕಾಗಿ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಶ್ಯಾನುಬೋಗನಹಳ್ಳಿಯಲ್ಲಿ ನಡೆದಿದೆ.

ರಾಜೇಂದ್ರ (40) ನೇಣಿಗೆ ಶರಣಾದ ಅಭಿಮಾನಿ. ಪುನೀತ್ ರಾಜಕುಮಾರರಂತೆಯೇ ತನ್ನ ಕಣ್ಣನ್ನು ದಾನ ಮಾಡಿ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

ಭಾನುವಾರ ಸಂಜೆ ಸಾವನ್ನಪ್ಪಿದ ರಾಜೇಂದ್ರನ ಮೃತದೇಹವನ್ನು ಕಂಡ ಸಂಬಂಧಿಗಳು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ನಟ ಪುನೀತ್ ಸಾವಿನಿಂದ ಕಂಗಾಲಾಗಿದ್ದ ರಾಜೇಂದ್ರ, ಇದೇ ದುಃಖದಲ್ಲಿ ಪುನೀತ್ ಕಣ್ಣು ದಾನ ಮಾಡಿದ್ದನ್ನು ಆದರ್ಶವಾಗಿ ತೆಗೆದುಕೊಂಡು ವಿಷಯವನ್ನು ಮನೆಯವರಿಗೆ ತಿಳಿಸುತ್ತಲೇ ಇದ್ದ. ವರ್ಷದ ಹಿಂದೆ ಮದುವೆಯಾಗಿದ್ದ ರಾಜೇಂದ್ರ ತಮ್ಮ ನೆಚ್ಚಿನ ನಾಯಕನ ಮಾದರಿಯನ್ನು ಜೀವಂತವಾಗಿಡಲು ಜೀವ ಬಿಟ್ಟಿದ್ದಾನೆ ಎಂದು ಸಹೋದರ ಲೋಹಿತ್ ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’

 

ಭಾನುವಾರ ಮಧ್ಯಾಹ್ನ ತನ್ನ ತಾಯಿಯೊಂದಿಗೆ ನೇತ್ರದಾನ ಮಾಡಿದ ನೆಚ್ಚಿನ ನಟನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದ. ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *