– ವರದಿ ಪ್ರಸಾರದ ಬೆನ್ನಲ್ಲೇ ಬಂಧ ಮುಕ್ತಗೊಳಿಸಿದ ಪೊಲೀಸರು
ಆನೇಕಲ್: ಆಸ್ತಿಗಾಗಿ ಮಗನೇ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಆಹಾರ ನೀಡದೇ ನರಕಯಾತನೆ ಪಡುವಂತೆ ಮಾಡಿದ ಘಟನೆ ನಗರದ ಮಾರತಹಳ್ಳಿ ಸಮೀಪದ ಕಾಡಬಿಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವೆಂಕಟಸ್ವಾಮಿ ಎಂಬಾತ ತಾಯಿ ಮುನಿಯಮ್ಮ ಅವರನ್ನು ಹಂದಿಗೂಡಿನಂತೆ ಇದ್ದ ಮನೆಯಲ್ಲಿ ಕೂಡಿ ಹಾಕಿದ್ದ. ಅಲ್ಲದೇ ಪತ್ನಿ ಸುಜಾತ ಜೊತೆ ಸೇರಿಕೊಂಡು ಸರಿಯಾಗಿ ಊಟವೂ ನೀಡದೆ ಹಿಂಸೆ ನೀಡಿದ್ದ. ಮನೆಯಲ್ಲಿ ಕೂಡಿ ಹಾಕಿದ್ದ ಪರಿಣಾಮ ಯಾರೋಬ್ಬರು ಇವರ ಸಹಾಯಕ್ಕೂ ಬಂದಿರಲಿಲ್ಲ. ಮನೆಯಲ್ಲಿ ಸರಿಯಾಗಿ ಗಾಳಿ ಬೆಳಕು ಬಾರದ ಕಾಣದ ಕಿಟಕಿಯ ಬಳಿಯೇ ನಿಂತು ದಾರಿಯಲ್ಲಿ ಓಡಾಡುವ ಜನರಲ್ಲಿ ಸಹಾಯ ಕೇಳಿ ಮುನಿಯಮ್ಮ ಅವರು ಜೀವನ ನಡೆಸುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಪಬ್ಲಿಕ್ ಟಿವಿ ಮುನಿಯಮ್ಮ ಅವರು ಸ್ಥಿತಿಯನ್ನು ವರದಿ ಮಾಡಿತ್ತು. ವರದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತ ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮುನಿಯಮ್ಮರನ್ನು ಬಂಧನದಿಂದ ಮುಕ್ತ ಮಾಡಿದ್ದರು. ಅಲ್ಲದೇ ಮಗ ವೆಂಕಟಸ್ವಾಮಿಗೆ ಎಚ್ಚರಿಕೆ ನೀಡಿ ಸರಿಯಾಗಿ ನೋಡಿಕೊಳ್ಳುವಂತೆ ತಿಳಿಸಿದ್ದಾರೆ.
ಅಂದಹಾಗೇ ಕಾಡಬಿಸನಹಳ್ಳಿ ಸುತ್ತಮುತ್ತಲೂ ಭೂಮಿಗೆ ಬಂಗಾರದ ಬೆಲೆ ಇದ್ದು, ಮುನಿಯಮ್ಮ ಹೆಸರಿನಲ್ಲಿದ್ದ ಮೂರು ಎಕರೆ ಜಮೀನನ್ನು ವೆಂಕಟಸ್ವಾಮಿ ತನ್ನ ಹೆಸರಿಗೆ ಮಾಡಿಸಿಕೊಂಡಿದ್ರು. ಬಳಿಕ ಪತ್ನಿ ಮಕ್ಕಳೊಂದಿಗೆ ಮೂರು ಅಂತಸ್ತಿನ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply