ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

– ಪಟಾಕಿ ತ್ಯಜಿಸೋಣ, ಪುಸ್ತಕ ಕೊಳ್ಳೋಣ ಮತ್ತು ಓದೋಣ

ಮಡಿಕೇರಿ: ದೀಪಾವಳಿ ಹಬ್ಬವನ್ನು ಪರಿಸರ ಪೂರಕವಾಗಿ ಎಲ್ಲರೂ ಅಚರಣೆ ಮಾಡಬೇಕು. ‘ಪಟಾಕಿ ತ್ಯಜಿಸೋಣ, ಪುಸ್ತಕ ಕೊಳ್ಳೋಣ ಮತ್ತು ಓದೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಪಬ್ಲಿಕ್ ಹೀರೊ ಕೊಡಗಿನ ಶಾಲಾ ಶಿಕ್ಷಕ ಸತೀಶ್ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಗಾರ ನಡೆಸಿದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಗ್ರಾಮದ ಶಿಕ್ಷಕರಾದ ಸತೀಶ್ ಪಟಾಕಿಯ ಬದಲಾಗಿ ವಿದ್ಯಾರ್ಥಿಗಳಿಗೆ ಒಂದೊಂದು ಕನ್ನಡ ಪುಸ್ತಕವನ್ನು ಖರೀದಿಸಿ ಓದಲು ತಿಳಿಸಿದರಲ್ಲದೆ ಖರೀದಿಸಿದ ಅಷ್ಟೂ ಪುಸ್ತಕವನ್ನು ವಿದ್ಯಾರ್ಥಿಗಳು ಪರಸ್ಪರ ಹಂಚಿಕೊಂಡು ಓದಿದರೆ ಒಬ್ಬೊಬ್ಬ ವಿದ್ಯಾರ್ಥಿಯು 30ಕ್ಕೂ ಅಧಿಕ ಪುಸ್ತಕವನ್ನು ಓದಿದಂತಾಗಿ ಜ್ಞಾನ ಹೆಚ್ಚಾಗುತ್ತದೆ ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು. ಇದನ್ನೂ ಓದಿ: ದೀಪಾವಳಿ ಗಿಫ್ಟ್ ಅಲ್ಲ, ಪೆಟ್ರೋಲ್, ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು: ಸತೀಶ್ ಜಾರಕಿಹೊಳಿ

ವಿದ್ಯಾರ್ಥಿಗಳು ವಿವಿಧ ಬಣ್ಣ ಬಣ್ಣದ ಬೆಳಕಿನ ದೀಪಗಳನ್ನು ಹಚ್ಚಿ ಆನಂದಿಸಿದರಲ್ಲದೆ, ಪಟಾಕಿ ರಹಿತ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಭರವಸೆಯನ್ನು ನೀಡಿದರು. ಪಟಾಕಿಯಿಂದ ಅಪಘಾತಕ್ಕೆ ಒಳಗಾಗುತ್ತಿರುವವರಲ್ಲಿ ಪುಟ್ಟ ಮಕ್ಕಳ ಸಂಖ್ಯೆಯೇ ಹೆಚ್ಚಾಗಿರುವುದರಿಂದ ಪಟಾಕಿಯಿಂದ ಆದಷ್ಟೂ ದೂರವಿರಲು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪಟಾಕಿಯ ಸದ್ದಿಗೆ ಮತ್ತು ಅದರ ಹೊಗೆಗೆ ಮನೆಯ ಮೂಕ ಜೀವಿ ನಾಯಿ, ಚಿಲಿಪಿಲಿಗುಟ್ಟುವ ಪಕ್ಷಿ, ಬಣ್ಣಬಣ್ಣದ ಪತಂಗಗಳು ಹೆದರಿ ಎಲ್ಲೋ ಮರೆಯಾಗುತ್ತದೆ. ಅಸ್ವಸ್ಥರು, ವೃದ್ಧರು ಹೃದ್ರೋಗಿಗಳು, ಬಾಣಂತಿಯರು ಯಾತನೆ ಪಡುತ್ತಾರೆ. ದೀಪಾವಳಿ ಬೆಳಕಿನ ಹಬ್ಬ ಬಣ್ಣಬಣ್ಣದ ಆಕಾಶ ಬುಟ್ಟಿಗಳನ್ನು ಮನೆಯಲ್ಲಿರಿಸಿ ಅಲಂಕರಿಸಿ ಆಸ್ವಾದಿಸುವ ಹಬ್ಬ. ಇದು ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳುವ ಪುರಾಣ ಇತಿಹಾಸಗಳ ಕತೆಯನ್ನು ಮೆಲುಕು ಹಾಕುವ ಹಬ್ಬವಾಗಬೇಕು ಎಂದು ಮಕ್ಕಳಿಗೆ ಸಂದೇಶವನ್ನು ನೀಡಿದರು. ಇದನ್ನೂ ಓದಿ: ಲಂಡನ್‍ನಿಂದ ಬರೋ ಉಡುಗೊರೆಗೆ ಆಸೆಪಟ್ಟು 4.49 ಲಕ್ಷ ರೂ. ಕಳ್ಕೊಂಡ್ರು!

ಸಂಭ್ರಮ ಸಡಗರದಿಂದ ಸುರಕ್ಷಿತವಾಗಿ ದೀಪಾವಳಿ ಆಚರಿಸಿ ಪ್ರತಿ ಮನೆ-ಮನೆಯಲ್ಲೂ ಪಟಾಕಿ ಹೊಡೆಯುವುದಕ್ಕಿಂತ ಸಮುದಾಯಗಳು ಒಂದೆಡೆ ಸೇರಿ ಬಯಲಿನಲ್ಲಿ ಆಚರಿಸುವಂತಾದರೆ ಮಾಲಿನ್ಯದ ಪ್ರಮಾಣವನ್ನು ಕುಗ್ಗಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ರೀತಿ ಬೆಳಕಿನ ಹಬ್ಬ ಶಬ್ದ ರಹಿತ ಮತ್ತು ಮಾಲಿನ್ಯ ರಹಿತವಾದರೆ ನಿಜವಾಗಿಯೂ ಆಚರಣೆಗೊಂದು ಅರ್ಥ ಎಂದರು. ಶಬ್ದಕ್ಕಿಂತ ಬೆಳಕೆ ಮೌಲ್ಯಯುತ ಎಂಬುದನ್ನು ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ತೋರಿಸಿಕೊಟ್ಟರು.

Comments

Leave a Reply

Your email address will not be published. Required fields are marked *