ನಿವೃತ್ತಿ ನಂತ್ರವೂ ಮನದ `ಗ್ರಹಣ’ ಬಿಡಿಸಲು ಹೋರಾಡ್ತಿದ್ದಾರೆ ಉಡುಪಿಯ ಎ.ಪಿ ಭಟ್

ಉಡುಪಿ: ಗ್ರಹಣ ಬಂತು ಅಂದರೆ ಜ್ಯೋತಿಷಿಗಳು ತಮ್ಮದೇ  ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣ  ಮಾಡುತ್ತಾರೆ. ಆ ಹೋಮ ಮಾಡಿ, ಈ ಪೂಜೆ ಮಾಡಿಸಿ ಅಂತ ಜನರಲ್ಲಿ ಭಯ ಹುಟ್ಟಿಸ್ತಾರೆ. ಆದರೆ ಇಲ್ಲೊಬ್ಬ ಭೌತಶಾಸ್ತ್ರಜ್ಞ ಡಿಸೆಂಬರ್ 26 ರ ಕಂಕಣ ಸೂರ್ಯಗ್ರಹಣ ನೋಡಿ ಅಂತ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದ ಸಾವಿರ ಶಾಲೆಗಳತ್ತ ಹೊರಟಿದ್ದಾರೆ. ಅವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

ಉಡುಪಿಯ ಅನಂತ ಪದ್ಮನಾಭ ಭಟ್ ಅವರು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾಗಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರು. ಆದರೆ ನಿವೃತ್ತಿ ನಂತರವೂ ಎಪಿ ಭಟ್ ಮಾತ್ರ ಸುಮ್ಮನೆ ಕುಳಿತಿಲ್ಲ . ರಾಜ್ಯದ ಒಂದು ಲಕ್ಷ ಮಕ್ಕಳ ಕಣ್ಮುಂದೆ ಖಗೋಳ ವಿಸ್ಮಯ ತೆರೆದಿಡಲು ಹೊರಟಿದ್ದಾರೆ. ಡಿಸೆಂಬರ್ 26ರಂದು ನಡೆಯುವ ಕಂಕಣ ಸೂರ್ಯಗ್ರಹಣದ ಬಗ್ಗೆ ಮಕ್ಕಳಿಗೆ ಜಾಗೃತಿ ಮತ್ತು ಮಾಹಿತಿ ಕೊಡುತ್ತಾ ಈಗಾಗಲೇ ಮುನ್ನೂರು ಶಾಲೆಗಳಿಗೆ ತಲುಪಿದ್ದಾರೆ. ಸಾವಿರ ಶಾಲೆಗಳ ಟಾರ್ಗೆಟ್ಟನ್ನು ಹಾಕಿಕೊಂಡಿದ್ದಾರೆ.

ಪೂರ್ಣಪ್ರಜ್ಞ ಖಗೋಳ ವೀಕ್ಷಕರ ಸಂಘವನ್ನು ಹುಟ್ಟು ಹಾಕಿರುವ ಎಪಿ ಭಟ್, ವರ್ಷಪೂರ್ತಿ ಆಕಾಶ ವೀಕ್ಷಣಾ ಕಾರ್ಯಕ್ರಮ ಮಾಡುತ್ತಾರೆ. ಚಂದ್ರಗ್ರಹಣ, ಸೂರ್ಯಗ್ರಹಣ, ನಕ್ಷತ್ರಗಳು, ಗ್ರಹಗಳ ಬಗ್ಗೆ ಜನರಿಗೆ, ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ಮೂಲಕ ಮಾಹಿತಿ ಕೊಡುತ್ತಾರೆ. ಮಕ್ಕಳ ಜೊತೆ ಮಕ್ಕಳಂತೆ ಮಾತನಾಡುತ್ತಲೇ  ಭೌತ ವಿಜ್ಞಾನದ ಬಗ್ಗೆ ಅರಿವು ಮೂಡಿಸುತ್ತಾರೆ.

ಜ್ಯೋತಿಷಿಗಳಿಗೆ ಗ್ರಹಣಗಳು ಕೆಟ್ಟ ಪರಿಣಾಮ ಬೀರುವ ಬೀರುವ ವಿದ್ಯಮಾನ. ಆದರೆ ಭೌತ ಶಾಸ್ತ್ರಜ್ಞರಿಗೆ ಅದೊಂದು ಅದ್ಭುತ. ಗ್ರಹಣದ ಬಗ್ಗೆ ಭಯ ಹುಟ್ಟಿಸುವ ಬದಲು, ಮಕ್ಕಳಲ್ಲಿ ಈ ಬಗ್ಗೆ ಜ್ಞಾನ ಬೆಳೆಸುವುದು ಒಂದೊಳ್ಳೆ ಕೆಲವೇ ಸರಿ.

Comments

Leave a Reply

Your email address will not be published. Required fields are marked *