ಉಡುಪಿ: ಒಬ್ಬ ಒಳ್ಳೆಯ ಶಿಕ್ಷಕ ಒಂದು ಶಾಲೆಯನ್ನು ಮಾತ್ರವಲ್ಲ ಒಂದು ಊರನ್ನೇ ಬದಲಾಯಿಸಬಹುದು ಅನ್ನೋ ಮಾತಿದೆ. ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಮುರಳಿ ಕಡೆಕಾರು ಮಾಸ್ಟರ್ ಸರ್ಕಾರಕ್ಕೂ ಮುನ್ನವೇ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದವರು.

ಮುರುಳಿ ಅವರು ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಹೆಡ್ ಮಾಸ್ಟರ್. ಗಣಿತ ಬೋಧಿಸುವ ಇವರು ಈ ಶಾಲೆಗೆ ಬಂದ ಮೇಲೆ ಶಾಲೆಯ ಚಿತ್ರಣವೇ ಬದಲಾಗಿದೆ. 2000ನೇ ಇಸವಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಶುರು ಮಾಡಿದ ಹೆಗ್ಗಳಿಕೆ ಇವರದ್ದು. ದಾನಿಗಳಿಂದ ದೇಣಿಗೆ ಪಡೆದು ಮಕ್ಕಳಿಗೆ ಗಂಜಿ ಊಟ ಶುರು ಮಾಡಿದ್ದರು. ಇದಾಗಿ ಒಂದು ವರ್ಷದ ನಂತರ ಕೃಷ್ಣಮಠದಿಂದ ಬಿಸಿಯೂಟ ಸರಬರಾಜು ಶುರುವಾಯ್ತು. ಇದಾಗಿ ಆರು ವರ್ಷದ ನಂತರ ರಾಜ್ಯ ಸರ್ಕಾರ ಮಕ್ಕಳಿಗೆ ಬಿಸಿಯೂಟ ನೀಡಿತು.

ಇದಲ್ಲದೆ ಈ ಶಾಲೆಗೆ ಸೇರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಉಳಿತಾಯ ಖಾತೆ ತೆರೆಯಲಾಗುತ್ತದೆ. 1 ರೂಪಾಯಿಯಿಂದ ಸೇವಿಂಗ್ ಅಕೌಂಟ್ ಶುರುವಾಗುತ್ತೆ. ವಿದ್ಯಾರ್ಥಿಗಳು 10ನೇ ತರಗತಿ ಮುಗಿಸಿಹೋಗುವಾಗ ಸುಮಾರು 10 ರಿಂದ 20 ಸಾವಿರ ರೂಪಾಯಿ ಉಳಿಸುತ್ತಾರೆ. ಬರುವ ಬಡ್ಡಿಯಲ್ಲಿ ಅರ್ಧದಷ್ಟು ಖಾತೆ ಹೊಂದಿದ ಮಕ್ಕಳಿಗೆ ನೀಡಿದ್ರೆ, ಮಿಕ್ಕುಳಿದ ಹಣವನ್ನ ಶಾಲೆಯ ಅಭಿವೃದ್ಧಿ, ಬಡ ಮಕ್ಕಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ವಿನಿಯೋಗಿಸಲಾಗುತ್ತದೆ.

ಶಾಲೆ ಬಿಟ್ಟ ಮೇಲೂ ಮುರಳಿ ಅವರು ಸಂಜೆ 7ರವರೆಗೆ ಕ್ಲಾಸ್ ಮಾಡ್ತಾರೆ. ಯಕ್ಷಗಾನದಲ್ಲೂ ಭಾಗಿಯಾಗ್ತಾರೆ. ಮುರಳಿ ಅವರ ಸೇವ ಹೀಗೆ ಮುಂದುವರೆಯಲಿ ಎನ್ನುವುದು ನಮ್ಮ ಆಶಯ.



https://www.youtube.com/watch?v=gArcpAAgrRA

Leave a Reply