ಅಮ್ಮನ ಸ್ಮರಣಾರ್ಥ ಬಸ್ ಶೆಲ್ಟರ್ ನಿರ್ಮಾಣ- ಸಿಸಿಟಿವಿ ಅಳವಡಿಸಿ ಭದ್ರತೆ

ಬಳ್ಳಾರಿ: ಪತ್ನಿ ಮುಮ್ತಾಜ್‍ಗಾಗಿ ಶಹಜಹಾನ್ ತಾಜಮಹಲ್ ನಿರ್ಮಿಸಿ ಇತಿಹಾಸ ಸೇರಿದ್ದಾರೆ. ಆದ್ರೆ ಬಳ್ಳಾರಿಯಲ್ಲಿ ಮಕ್ಕಳು ತಮ್ಮ ತಾಯಿಯ ನೆನಪಿಗಾಗಿ ಬಸ್ ಶೆಲ್ಟರ್ ನಿರ್ಮಿಸಿದ್ದು, ತಂಗುದಾಣದಲ್ಲಿ ಸಿಸಿಟಿವಿ ಅಳವಡಿಸಿ ಪ್ರಯಾಣಿಕರಿಗೆ ಭದ್ರತೆಯನ್ನ ಒದಗಿಸಿದ್ದಾರೆ.

ಕಂಪ್ಲಿ ಪಟ್ಟಣದ ನಿವಾಸಿಯಾಗಿರೋ ಬಿಡಿಸಿಸಿ ಬ್ಯಾಂಕ್‍ನ ನಿವೃತ್ತ ವ್ಯವಸ್ಥಾಪಕರಾದ ಗಜ್ಜಲ ಭಕ್ತವತ್ಸಲಂ ಮತ್ತು ಅವರ ಮಕ್ಕಳು ಇವತ್ತಿನ ನಮ್ಮ ಪಬ್ಲಿಕ್ ಹೀರೋಗಳು. ಇವರು ತಮ್ಮ ತಾಯಿಯ ಆಸೆಯಂತೆ ಜಿಲ್ಲೆಯ ಕಂಪ್ಲಿ ಪಟ್ಟಣದ ಅನಕೃ ವೃತ್ತದ ಹತ್ತಿರ ಸುಸಜ್ಜಿತವಾದ ಬಸ್ ಶೆಲ್ಟರ್ ನಿರ್ಮಿಸಿದ್ದಾರೆ.

ಕಂಪ್ಲಿ ಪಟ್ಟಣದಲ್ಲಿ ಸರ್ಕಾರ ನಿರ್ಮಿಸಿರುವ ಬಸ್ ನಿಲ್ದಾಣ ಇದೆ. ಆದ್ರೆ ಹಳೇ ಬಸ್ ನಿಲ್ದಾಣದಿಂದ ಬಳ್ಳಾರಿ ಕಡೆ ತೆರಳುವ ಪ್ರಯಾಣಿಕರು ಅನಕೃ ವೃತ್ತದ ಬಳಿಯೇ ರಸ್ತೆ ಮಧ್ಯ ಬಸ್‍ಗಾಗಿ ಕಾಯಬೇಕಿತ್ತು. ದಿನಮಣಿ ಅವರನ್ನ ಪತಿ ಭಕ್ತವತ್ಸಲಂ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆತರುವ ವೇಳೆ ತುಂಬಾ ಆಯಾಸಗೊಂಡು ಸುಸ್ತಾಗಿದ್ದರಂತೆ. ಅಂದು ಇಲ್ಲಿ ಬಸ್ ಶೆಲ್ಟರ್ ನಿರ್ಮಿಸಲು ಪುತ್ರರಿಗೆ ದಿನಮಣಿ ಅವ್ರು ಹೇಳಿದ್ರಂತೆ. ಅಮ್ಮನ ಮಾತಿನಂತೆ ಮೂವರು ಮಕ್ಕಳು 6 ಲಕ್ಷ ರೂ. ಖರ್ಚು ಮಾಡಿ ಶೆಲ್ಟರ್ ನಿರ್ಮಿಸಿದ್ದಾರೆ.

ಈ ತಂಗುದಾಣದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಸಲಾಗಿದೆ. ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಸೀಟ್ ಕಲ್ಪಿಸಲಾಗಿದೆ. ಗಜ್ಜಲ ಕುಟುಂಬದ ಕಾರ್ಯಕ್ಕೆ ಜನ ಭೇಷ್ ಅಂತಿದ್ದಾರೆ. ಅಮ್ಮನಿಗೆ ಕೊಟ್ಟ ಮಾತಿನಂತೆ ಮಕ್ಕಳು ಶೆಲ್ಟರ್ ನಿರ್ಮಿಸಿದ್ದು, ಇದೀಗ ಇದರಿಂದ ಸಾರ್ವಜನಿಕರಿಗೆ ಉಪಕಾರವಾಗಿದೆ.

Comments

Leave a Reply

Your email address will not be published. Required fields are marked *